ಕಲ್ಲಿದ್ದಲು ಅಭಾವ: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 2 ಘಟಕ ಸ್ಥಗಿತ
ಬಳ್ಳಾರಿ, ಅ.10: ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಮುಂದುವರೆದಿದ್ದು, ಬಳ್ಳಾರಿ ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡು ಘಟಕಗಳು ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ಸದ್ಯ ಒಂದು ಘಟಕದಿಂದ ಮಾತ್ರ ವಿದ್ಯುತ್ ಉತ್ಪಾದನೆ ಮುಂದುವರಿದಿದೆ.
ಬಿಟಿಪಿಎಸ್(ಶಾಖೋತ್ಪನ್ನ ವಿದ್ಯುತ್ ಕೇಂದ್ರ)ನ ಮೂರು ಘಟಕಗಳಿಂದ ನಿತ್ಯ 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಮೂರು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಿತ್ಯ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಆದರೆ, ಕಲ್ಲಿದ್ದಲು ಪೂರೈಕೆಯಾಗುತ್ತಿರುವುದು ಬರೀ 8 ಸಾವಿರ ಮೆ.ಟನ್ ಮಾತ್ರ. ಹೀಗಾಗಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಅಭಾವ ಎದುರಾಗಿದೆ.
ಬಿಟಿಪಿಎಸ್ನ ಮೂಲಗಳು ನೀಡುವ ಮಾಹಿತಿ ಪ್ರಕಾರ, ಸದ್ಯ 15 ಸಾವಿರ ಮೆ.ಟನ್ ಕಲ್ಲಿದ್ದಲು ಮಾತ್ರ ಇದ್ದು, ಇನ್ನೆರಡು ದಿನಗಳಲ್ಲಿ ಖಾಲಿಯಾಗಲಿದೆ. ಇಂದು ಅಥವಾ ನಾಳೆ ಮತ್ತಷ್ಟು ಕಲ್ಲಿದ್ದಲು ಬರುವ ಸಾಧ್ಯತೆ ಇದೆ. ಒಂದು ವೇಳೆ ಪೂರೈಕೆ ಪೂರ್ಣ ಸ್ಥಗಿತವಾದರೆ ಮೂರೂ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.