ಮೈಸೂರು ದಸರಾ; ಜಂಬೂ ಸವಾರಿಗೆ ಚಾಲನೆ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು.
ಸರಳ ಸಾಂಪ್ರದಾಯಿಕ ದಸರಾ ಆಚರಣೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತಾದರೂ ಸಾವಿರಾರು ಮಂದಿ ಅರಮನೆಯೊಳಗೆ ಪ್ರವೇಶಿಸಿ ಜಂಬೂಸವಾರಿ ಮೆರವಣಿಗಗೆ ಸಾಕ್ಷಿಯಾದರು.
ಕ್ಯಾಪ್ಟನ್ ಅಭಿಮನ್ಯು ಆನೆ ಮೇಲೆ ಚಿನ್ನದ ಅಂಬಾರಿ ಯಲ್ಲಿದ್ದ ಶ್ರೀಚಾಮುಂಡೇಶ್ವರಿ ದೇವಿಗೆ ವೇದಿಕೆ ಮೇಲಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಂಜೆ 5 ರಿಂದ 5.30 ಗಂಟೆಯೊಳಗಿನ ಶುಭಮುಹೂರ್ತದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು.
ಅರಮನೆಯಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪ ತಲುಪುತ್ತಿದ್ದ ಮೆರವಣಿಗೆ ಕೋವಿಡ್ ಕಾರಣ ಅರಮನೆಯೊಳಗೆ ಸಾಗಿ ಅಂತ್ಯಗೊಂಡಿತು.
ಮೆರವಣಿಗೆ ಮುಂಭಾಗ ಪೊಲೀಸ್ ಅಶ್ವಾರೋಹಿ ಪಡೆ ಸಾಗುವ ಮೂಲಕ ವಿಶೇಷ ಭದ್ರತೆ ನೀಡಲಾಗಿತ್ತು.
ಜಂಬೂಸವಾರಿಗೂ ಮುನ್ನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ 4.30ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂಧಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಡಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.
ಈ ವೇಳೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್, ಹೈಕೋಟ್೯ಮುಖ್ಯ ನ್ಯಾಯಾಧೀಶರು, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ನಗರ ಪೊಲೀಸ್ ಆಯುಕ್ತರು ಡಾ.ಚಂದ್ರಗುಪ್ತ ಉಪಸ್ಥಿತರಿದ್ದರು.