ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಗೆ ವಂಚನೆ; ಪ್ರಕರಣ ದಾಖಲು
ಶಂಕರ್ ಬಿದರಿ
ಬೆಂಗಳೂರು, ಅ.15: ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಸಂಖ್ಯೆ ಸೇರಿಸಬೇಕೆಂದು ನೆಪವೊಡ್ಡಿ ನಿವೃತ್ತ ಐಪಿಎಸ್ ಅಧಿಕಾರಿಗೆ ಕರೆ ಮಾಡಿದ ದುಷ್ಕರ್ಮಿಗಳು 89 ಸಾವಿರ ರೂ.ವಂಚನೆಗೈದಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ದೂರು ನೀಡಿದ ಮೇರೆಗೆ ಆಗ್ನೇಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ದಿನಗಳ ಹಿಂದೆ ಎಸ್ ಬಿಐ ಬ್ಯಾಂಕ್ ಕಡೆಯಿಂದ ಶಂಕರ್ ಬಿದರಿ ಸಂದೇಶ ಸ್ವೀಕರಿಸಿದ್ದಾರೆ.ಕೆಲ ಹೊತ್ತಿನ ಬಳಿಕ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಸಂಖ್ಯೆ ಸೇರಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.
ನಿಜವಾಗಿಯೂ ಬ್ಯಾಂಕ್ ಅಧಿಕಾರಿಯೇ ಕರೆ ಮಾಡುತ್ತಿದ್ದಾರೆ ಎಂದು ನಂಬಿದ ಬಿದರಿ ದುಷ್ಕರ್ಮಿಗಳಿಗೆ ವಿವರಗಳನ್ನು ಒದಗಿಸಿದ್ದಾರೆ. ಬಳಿಕ ಬಿದರಿ ಅವರ ಬ್ಯಾಂಕ್ ಖಾತೆಯಿಂದ 89 ಸಾವಿರ ರೂ. ಎಗರಿಸಿದ್ದಾರೆ. ಹಣ ಕಡಿತಗೊಂಡಿರುವ ಸಂದೇಶ ಬರುತ್ತಿದ್ದಂತೆ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ.
Next Story