ನನ್ನನ್ನು ಯಾರು ಸೈಡ್ಲೈನ್ ಮಾಡಿಲ್ಲ: ಯಡಿಯೂರಪ್ಪ
ಶಿವಮೊಗ್ಗ, ಅ.19: ಬಿಜೆಪಿಯಲ್ಲಿ ತನ್ನನ್ನು ಯಾರು ಸೈಡ್ಲೈನ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿಯಲ್ಲಿ ತಮ್ಮನ್ನು ಸೈಡ್ಲೈನ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ತನ್ನನ್ನು ಸೈಡ್ಲೈನ್ ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು .ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ ಹೊರತು ಯಾರ ಒತ್ತಡಕ್ಕೂ ಮಣಿದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಳ್ಳಲಿ:
ಇತ್ತೀಚೆಗೆ ಆರೆಸ್ಸೆಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಸ್ಥಾನಕ್ಕೆ ಈ ಹೇಳಿಕೆಗಳು ಶೋಭೆ ತರುವುದಿಲ್ಲ.ಇನ್ನಾದರೂ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಗೌರವದಿಂದ ಮಾತನಾಡಲಿ. ಇಲ್ಲವಾದರೆ ಜನರೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರಿಗೆ ಮೋದಿ ವಂಚಿಸಿಲ್ಲ:
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ನನ್ನ ಸರ್ಕಾರ ಹಾಗೂ ಈಗಿನ ಸರ್ಕಾರ ಯಾರಿಗೂ ಅನ್ಯಾಯ ಮಾಡಿಲ್ಲ.ಅಲ್ಪಸಂಖ್ಯಾತರಿಗೆ ವಂಚನೆ ಮಾಡಿದ ಉದಾಹರಣೆ ಇದ್ದರೆ ನನಗೆ ಕೊಡಿ. ಅವರಿಗೊಂದು, ಇವರಿಗೊಂದು ಯಾವತ್ತು ಮಾಡಿಲ್ಲ. ಭೇದ ಮಾಡದೆ ಎಲ್ಲರನ್ನು ಸಮಾನವಾಗಿ ನೋಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಹಾಗಾಗಿ ಯಾವುದೇ ಅಲ್ಪಸಂಖ್ಯಾತರು ಬೇಸರ ಮಾಡಿಕೊಳ್ಳುವ ವಿಚಾರವೇ ಬರಲ್ಲ ಎಂದರು.