ನಿಗಮ, ಮಂಡಳಿಗಳ ಅನುದಾನದ ವಿವರ ಸಲ್ಲಿಸದಿದ್ದರೆ ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ: ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು, ಅ.21: ಕರ್ನಾಟಕ ಕ್ರೈಸ್ತರ ಅಭಿವದ್ಧಿ ಮಂಡಳಿ ಸೇರಿ ಹೊಸದಾಗಿ ರಚಿಸಲಾಗಿರುವ ನಿಗಮ-ಮಂಡಳಿಗಳಿಗೆ ಮಂಜೂರು ಮಾಡಲಾಗಿರುವ ಅನುದಾನದ ವಿವರಗಳನ್ನು ಒಂದು ವಾರದಲ್ಲಿ ಸಲ್ಲಿಸದಿದ್ದಲ್ಲಿ ನಿಗಮ-ಮಂಡಳಿಗಳು ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಈ ವಿಚಾರವಾಗಿ ವಕೀಲ ಎಸ್.ಬಸವರಾಜ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ.ಸಚಿನ್ ಶಂಕರ್ ಮುಗದಂ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು.
ಈ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ಹೊಸದಾಗಿ ರಚಿಸಲಾಗಿರುವ ನಿಗಮ-ಮಂಡಳಿಗಳಿಗೆ ಮಂಜೂರು ಮಾಡಲಾದ ಹಣಕಾಸಿನ ವಿವರಗಳನ್ನು ನೀಡಲು ಒಂದು ವಾರ ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನಿಗಮ-ಮಂಡಳಿಗಳಿಗೆ ಸರಕಾರ ನೀಡಿದ ಅನುದಾನ ಎಷ್ಟು, ಅದರಲ್ಲಿ ಎಷ್ಟು ಖರ್ಚಾಗಿದೆ ಎಂದು ವಿವರವಾದ ಮಾಹಿತಿ ನೀಡಲು 2021ರ ಆ.13ಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ, ಸರಕಾರ ಕಾಲಾವಕಾಶ ಕೇಳುತ್ತಲೇ ಬಂದಿದೆ. ಆಗಸ್ಟ್ ಹೋಗಿ ಈಗ ಅಕ್ಟೋಬರ್ ಕೊನೆಗೊಳ್ಳುವ ಕಾಲ ಬಂದಿದೆ. ಇದು ಕೊನೆಯ ಅವಕಾಶ. ಒಂದು ವಾರದಲ್ಲಿ ವಿವರ ನೀಡದಿದ್ದರೆ ನಿಗಮ-ಮಂಡಳಿಗಳು ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಬಿವೃದ್ಧಿ ನಿಗಮ, ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.