ವಿಧಾನಸೌಧಕ್ಕೆ ಬೀಗ ಹಾಕಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
"ಸರಕಾರದ ಯಾವುದೇ ಕೆಲಸಗಳು ನಿಂತಿಲ್ಲ"
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿಜಯಪುರ, ಅ. 25: ‘ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಬೀಗ ಹಾಕಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಒಂದೆರಡು ದಿನಗಳ ಮೂರ್ನಾಲ್ಕು ಮಂದಿ ಸಚಿವರು ಉಪಚುನಾವಣಾ ಪ್ರಚಾರಕ್ಕೆ ಬಂದು-ಹೋಗಿದ್ದಾರೆ. ಸರಕಾರದ ಯಾವುದೇ ಕೆಲಸಗಳು ನಿಂತಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ತಮ್ಮ ಆಡಳಿತಾವಧಿಯಲ್ಲಿ ಇವರೆಲ್ಲ ಏನೆಲ್ಲಾ ಮಾಡಿದ್ದಾರೆಂಬುದು ನಮಗೂ ಗೊತ್ತಿದೆ. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ. ಯಾವುದೇ ಕೆಲಸಗಳನ್ನು ನಿಲ್ಲಿಸಿಲ್ಲ, ನಿಲ್ಲಿಸುವ ಪ್ರಶ್ನೆಯೂ ಉದ್ಬವಿಸುವುದಿಲ್ಲ' ಎಂದು ವಿವರಣೆ ನೀಡಿದರು.
‘ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆ ಸರಿಯಲ್ಲ. ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆಯೇ ಇಲ್ಲ. ನಾವು ನಮ್ಮ ಪಕ್ಷದ ಸಂಘಟನೆ ಮಾತ್ರ ಮಾಡುತ್ತಿದ್ದೇವೆ. ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡುವುದಿಲ್ಲ' ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
‘ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ' ಮಾಡುತ್ತಿದ್ದಾರೆಂಬ ಶಾಸಕ ಝಮೀರ್ ಅಹ್ಮದ್ ಖಾನ್ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ. ಇದು ವಿಪರೀತ ಕಲ್ಪನೆ ಅಷ್ಟೇ, ಅದಕ್ಕೆ ಯಾವುದು ಆಧಾರವಿಲ್ಲ. ಸುಖಾ ಸುಮ್ಮನೆ ಆರೋಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ' ಎಂದು ಬೊಮ್ಮಾಯಿ ತಿರುಗೇಟು ನೀಡಿದರು.