ನಾಳೆಯಿಂದ ನಮ್ಮ ಆಟ ಎಂದರೆ ದುಡ್ಡು ಹಂಚುವುದಾ ಸೋಮಣ್ಣನವರೇ?: ಕುಮಾರಸ್ವಾಮಿ ಪ್ರಶ್ನೆ
ಸಂಜೆವರೆಗೂ ಕುಮಾರಸ್ವಾಮಿ ಫ್ರೀ ಆಗಿ ಓಡಾಡಲಿ; ನಾಳೆಯಿಂದ ನಮ್ಮ ಆಟ ಆರಂಭ ಎಂದ ಸಚಿವ ಸೋಮಣ್ಣಗೆ ಹೆಚ್ಡಿಕೆ ತರಾಟೆ
ವಿಜಯಪುರ, ಅ.27: "ಇವತ್ತು ಸಂಜೆ ತನಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿಂದಿಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ" ಎಂದು ಉಪ ಚುನಾವಣೆ ಬಹಿರಂಗ ಪ್ರಚಾರದ ಅಂತ್ಯವಾಗುವುದಕ್ಕೆ ಮೊದಲು ಹೇಳಿಕೆ ನೀಡಿರುವ ವಸತಿ ಸಚಿವ ವಿ.ಸೋಮಣ್ಣ ರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.
ಇಂದಿಲ್ಲಿ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; “ನಾಳೆಯಿಂದ ನಮ್ಮ ಆಟ ಆರಂಭ ಎಂದರೆ ಅರ್ಥವೇನು? ಆಟ ಎಂದರೆ ದುಡ್ಡು ಹಂಚುವುದೇ?” ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಆಟವನ್ನು ಬರೀ ಚುನಾವಣೆಗಷ್ಟೇ ಸೀಮಿತ ಮಾಡಿಕೊಳ್ಳುತ್ತೀರೋ ಅಥವಾ ಸುಳ್ಳು ಹೇಳಿಕೊಂಡು, ಸುಳ್ಳು ಜಾಹೀರಾತುಗಳನ್ನು ಕೊಟ್ಟುಕೊಂಡು ಐದು ಲಕ್ಷ ಮನೆ ಕೊಟ್ಟೆ, ಆರು ಲಕ್ಷ ಮನೆ ಕೊಟ್ಟೆ ಅಂತ ಹೇಳಿಕೊಂಡು ತಿರುಗ್ತೀರೋ? ಎಂದು ಕುಮಾರಸ್ವಾಮಿ ಟೀಕಿಸಿದರು.
ಹಿಂದೆ ಐದು ವರ್ಷ ಆಡಳಿತ ನಡೆಸಿದಾಗ ಹಾಗೂ ಈಗ ಎರಡೂವರೆ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರದಿಂದ ಸಿಂದಗಿ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಈ ಕ್ಷೇತ್ರದತ್ತ ಸಚಿವರುಗಳು ತಲೆ ಹಾಕಿ ಮಲಗಿಲ್ಲ. ಆದರೆ, ನಾಳೆಯಿಂದ ಆಟ ಆಡ್ತೀವಿ ಎಂದು ಸಚಿವರು ಹೇಳಿರುವುದು ಬಿಜೆಪಿ ಉಪ ಚುನಾವಣೆಗಳನ್ನು ಹೇಗೆ ಗೆಲ್ಲುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು ಅವರು.