ಎಲ್ಲ ಧರ್ಮ, ಜಾತಿಯ ಜನರನ್ನು ಭಾರತೀಯರನ್ನಾಗಿಸಿರುವುದು ಸಂವಿಧಾನ: ಹೈಕೋರ್ಟ್ ನಿವೃತ್ತ ನ್ಯಾ. ನಾಗಮೋಹನ್ ದಾಸ್
ಕಡೂರು, ಅ.27: ದೇಶದ ಎಲ್ಲ ಧರ್ಮದ, ಜಾತಿಯ ಮನುಜರನ್ನು ಭಾರತೀಯರನ್ನಾಗಿಸಿದ ಸಂವಿಧಾನವನ್ನು ನಮ್ಮ ಪವಿತ್ರ ಗ್ರಂಥ ಎಂದು ಭಾವಿಸಿ ಆರಾಧಿಸಬೇಕು ಎಂದು ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ತಿಳಿಸಿದರು.
ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷದ ಅಂಗವಾಗಿ ಪಟ್ಟಣದ ಲಕ್ಷಾ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಗಾಂಧಿ ಯಾನ, ಕೃಷಿ ಕಾಯ್ದೆ, ರೈತ ಚಳವಳಿ ಮತ್ತು ಗಾಂಧಿ ಚಿಂತನೆಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 72ವರ್ಷದ ಸಂವಿಧಾನದ ಹಾದಿಯಲ್ಲಿ ರಾಜಕೀಯ ಆಡಳಿತಕ್ಕೆ ಒಳಪಡದ ದೇಶದ ಎಲ್ಲ ಭಾಗಗಳನ್ನು ಒಂದುಗೂಡಿಸಿ ಗಡಿ ನಿರ್ಮಿಸಲಾಗಿದೆ. ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ನಿರ್ಮಿಸಿದೆ, ಶಿಕ್ಷಣ ಆರೋಗ್ಯ ಉದ್ದ್ಯೋಗ ನೀಡಿದೆ, ಸಾಮಾಜಿಕ ನ್ಯಾಯವನ್ನು ಒದಗಿಸಿದೆ, ಜಾತಿ ಧರ್ಮಗಳ ಅರಾಜಕತೆಯನ್ನು ದೂರವಾಗಿಸುವ ನಿಟ್ಟಿನಲ್ಲಿ ಸಂವಿಧಾನ ಉತ್ತಮ ಕೆಲಸ ಮಾಡಿದೆ. ಇದು ಸಾಧನೆಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ರೈತರಿಗೆ ಅನುಕೂಲವಾಗುವಂತಹ ಹಲವು ಕಾನೂನುಗಳ ಜಾರಿಯಿಂದಾಗಿ ಪ್ರಸಕ್ತ ದೇಶ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದೆ, ಈರೀತಿ ದೇಶದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಿದ ಸಂವಿಧಾನದ ಕನಿಷ್ಠ ಅರಿವು ದೇಶದ ಪ್ರತಿ ಪ್ರಜೆಗೂ ಇರಬೇಕು ಎಂದರು.
ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ವ್ಯಾಪಾರ, ವಿದ್ಯಾರ್ಜನೆ, ಕೆಲಸ ಅರಸಿ ಬಂದ ಜನರು ಇಲ್ಲೇ ಉಳಿದರು, ಅವರೆಲ್ಲಾ ಭಾರತೀಯರನ್ನಾಗಿ ಮಾರ್ಪಾಡು ಮಾಡಿರುವುದು ನಮ್ಮ ಸಂವಿಧಾನ. ಇದನ್ನು ನಮ್ಮ ಪವಿತ್ರ ಗ್ರಂಥ ಎಂದು ಆರಾಧಿಸಬೇಕು ಎಂದ ಅವರು, ಸಂವಿಧಾನದದಲ್ಲಿ ದೋಷವಿಲ್ಲ, ನಾವು ಅದನ್ನು ಅರ್ಥಮಾಡಿಕೊಂಡಿರುವುದು ಸರಿಯಾಗಿಲ್ಲ, ಅದನ್ನು ಬದಲಿಸುವ ಆವಶ್ಯಕತೆಯೂ ಇಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುವ ಮನೋಭಾವನೆ ದೂರವಾಗಬೇಕಿದೆ ಎಂದರು.
ಹಸಿರು ಕ್ರಾಂತಿಯಿಂದ ರೈತರು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಬದಲು ಅವರಿಂದ ಭೂಮಿ ಕಿತ್ತುಕೊಳ್ಳಲು ಸರಕಾರ ಕಾಯ್ದೆ ಜಾರಿ ಮಾಡಿದೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕೆ ತಳ್ಳುತ್ತದೆ, ಭೂಮಿಯೊಂದಿಗೆ ರೈತರು ಭಾವನಾತ್ಮಕವಾಗಿ ಬೆರೆತಿದ್ದಾರೆ. ಅದನ್ನು ರೈತರಿಂದ ಕಿತ್ತುಕೊಳ್ಳಲು ಮುಂದಾಗಬೇಡಿ, ಕೇಂದ್ರ ರಾಜ್ಯ ಸರಕಾರದ ಕೃಷಿ ಕಾಯ್ದೆಗಳು ಸಂಪೂರ್ಣವಾಗಿ ರೈತರನ್ನು ಪಾತಾಳಕ್ಕೆ ತಳ್ಳುತ್ತವೆ. ರೈತರ ಜಮೀನನ್ನು ಗುತ್ತಿಗೆ ಪಡೆದು ತಮಗೆ ಬೇಕಾದ ಬೆಳೆ ಬೆಳೆದು ನಮಗೆ ಬೇಕಾಗುವ ಆಹಾರ ಧಾನ್ಯಗಳ ಅಭಾವ ಸೃಷ್ಟಿಸುವ ಖಾಸಗಿ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತಾರೆ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಜನರೇ ಮಾಲಕರಾಗಿದ್ದ ಸಂಸ್ಥೆಗಳನ್ನು ಉದ್ಯಮಪತಿಗಳಿಗೆ ನೀಡಿದರೆ ದೇಶದ ಸಂಕಷ್ಟ ಸಮಯದಲ್ಲಿಯೂ ಅವರು ಲಾಭ ಮಾಡಲು ನೋಡುತ್ತಾರೆಯೇ ಹೊರತು ದೇಶವನ್ನು ಸಂಕಷ್ಟದಿಂದ ಮೇಲೆತ್ತಲು ಬರುವುದಿಲ್ಲ, ಜನರು ಚಳವಳಿಯಲ್ಲಿ ತೊಡಗಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ಸ್ವಯಂ ಘೋಷಿತ ನಾಯಕರನ್ನು ಪ್ರಶ್ನಿಸುವವರೇ ಇಲ್ಲವಾಗುತ್ತಾರೆ ಎಂದರು.
ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಚಂದ್ರಮೌಳಿ, ಅಂಶುಮಂತ್, ನಿತಿನ್ ಕುಮಾರ್, ತರೀಕೆರೆ ಮಾಜಿ ಶಾಸಕ ಶಿವಶಂಕರಪ್ಪ, ಧ್ರುವ ಕುಮಾರ್, ರೈತ ಮುಖಂಡರು, ತಾಲೂಕಿನ ರೈತರು, ಹಲವು ಮುಖಂಡರು ಉಪಸ್ಥಿತರಿದ್ದರು.
ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದರೂ ಸರಕಾರ ಅದರ ಮೇಲೆ ಹಿಡಿತ ಇಟ್ಟುಕೊಂಡಿಲ್ಲದಿದ್ದರೇ ದೇಶ ಉಳ್ಳವರ ಸ್ವತ್ತಾಗಲಿದೆ. ಇದರ ವಿರುದ್ಧ ವಿರೋಧ ಪಕ್ಷಗಳು ಗಟ್ಟಿಯಾಗಿ ಧ್ವನಿ ಎತ್ತಬೇಕು. ಸಾಮಾನ್ಯ ನಾಗರಿಕರು ಸಾಧ್ಯವಾದಷ್ಟು ಸಮಾಜಕ್ಕೆ ಅನುಕೂಲವಾಗುವಂತಾಗಲು ಪ್ರತಿಭಟಿಸಬೇಕು.
- ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ್ ದಾಸ್