ಡಿ.ಕೆ.ಶಿವಕುಮಾರ್ ಆಪ್ತ ಗುತ್ತಿಗೆದಾರ ಯು.ಬಿ.ಶೆಟ್ಟಿ ನಿವಾಸದ ಮೇಲೆ ಐಟಿ ದಾಳಿ
ಧಾರವಾಡ, ಅ. 28: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮತದಾನದ ದಿನ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರು ಎನ್ನಲಾದ ಗುತ್ತಿಗೆದಾರರೊಬ್ಬರ ಮನೆ ಹಾಗೂ ಕಚೇರಿಯ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ಮಾಡಿದ ಘಟನೆ ನಡೆದಿದೆ.
ಗುರುವಾರ ನಗರದ ದಾಸನಕೊಪ್ಪ ವೃತ್ತದಲ್ಲಿರುವ ಪ್ರತಿಷ್ಠಿತ ಗುತ್ತಿಗೆದಾರ ಯು.ಬಿ.ಶೆಟ್ಟಿ ಅವರ ಮನೆಯ ಮೇಲೆ ಗೋವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಏಕಾಏಕಿ ದಾಳಿ ಮಾಡಿದ್ದು, ಅವರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಐದು ಮಂದಿ ಐಟಿ ಅಧಿಕಾರಿಗಳ ತಂಡ ಯು.ಬಿ.ಶೆಟ್ಟಿ ಅವರ ಮನೆಯ ಮೇಲೆ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಯು.ಬಿ.ಶೆಟ್ಟಿ ಅವರು ಉಡುಪಿಯ ಉಪ್ಪುಂದ ಮೂಲದವರು ಎಂದು ತಿಳಿದು ಬಂದಿದೆ. ಐಟಿ ದಾಳಿ ವೇಳೆ ಯು.ಬಿ.ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಸರಕಾರಿ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳ ಗುತ್ತಿಗೆದಾರರಾಗಿರುವ ಶೆಟ್ಟಿ ಅವರು ನಿವಾಸದಲ್ಲಿ ಅಧಿಕಾರಿಗಳ ಪರಿಶೀಲನೆ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಗೊತ್ತಾಗಿದೆ.
ಯು.ಬಿ.ಶೆಟ್ಟಿ ಅವರ ಉಪ್ಪುಂದ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.