ಆ್ಯಂಬುಲೆನ್ಸ್ ಟೆಂಡರ್ ಜಾರಿಗೆ ಅನುಮೋದನೆ ನೀಡಲು ವಿಳಂಬ: ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ನ.10: ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ಸಂಚಾರಕ್ಕೆ 1,800 ಕೋಟಿ ರೂ. ಮೊತ್ತದ ಟೆಂಡರ್ ಗೆ ಈವರೆಗೆ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಸರಕಾರ ತಾನಾಗಿಯೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿಯೇ ಹೈಕೋರ್ಟ್ಗೆ ಇಷ್ಟು ಪಿಐಎಲ್ ದಾಖಲಾಗುತ್ತಿವೆ. ಈಗಿರುವ ಆ್ಯಂಬುಲೆನ್ಸ್ಗಳಿಗೆ ಏಕೆ ಜಿಪಿಎಸ್ ಅಳವಡಿಸಿಲ್ಲ? ಆ್ಯಂಬುಲೆನ್ಸ್ಗಳಿಗೆ ಏಕೆ ಕಂಟ್ರೋಲ್ ರೂಮ್ ಸ್ಥಾಪಿಸಿಲ್ಲ? ಟೆಂಡರ್ ಅನುಮೋದನೆಗೆ ವಿಳಂಬ ಮಾಡುತ್ತಿರುವುದೇಕೆ? ಅಂತ ಪ್ರಶ್ನಿಸಿದ ಹೈಕೋರ್ಟ್ 10 ದಿನಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿದೆ.
ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ರೂಪಿಸಲು ನಿಗದಿಪಡಿಸಿದ್ದ 1,800 ಕೋಟಿ ಟೆಂಡರ್ ಅನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಿದ್ದರಿಂದ ಹೈಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವುದೇ ಕಾರಣವಿಲ್ಲದೆ ಜನೋಪಯೋಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಿದ್ದಕ್ಕೆ ಹೊಣೆ ಯಾರು? ಈ ಬಗ್ಗೆ ಸಾರ್ವಜನಿಕರಿಗೆ ಸರಕಾರ ಉತ್ತರ ಹೇಳಬೇಕು. ಟೆಂಡರ್ ಆಗಿದ್ದರೆ ಇಷ್ಟರಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುತ್ತಿತ್ತು. ಕೊವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನೆರವಾಗುತ್ತಿತ್ತು ಎಂದು ಈ ಹಿಂದೆ ನ್ಯಾಯಪೀಠವು ಅಸಮಾಧಾನ ಹೊರ ಹಾಕಿತ್ತು.