ಕಾಂಗ್ರೆಸ್ ಆರೋಪ ಆಧಾರ ರಹಿತ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ನ. 11: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ಈ ರೀತಿ ಆಧಾರ ರಹಿತ ಆರೋಪ ಮಾಡುವುದರಿಂದ ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿ ರಾಜಕೀಯ ಪಕ್ಷ ಎಂಬುದು ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದಿಲ್ಲಿ ಕಿಡಿಕಾಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ಮಾಡುವ ಸಲುವಾಗಿ ಕಾಂಗ್ರೆಸ್ ಈ ರೀತಿ ಆರೋಪ ಸರಿಯಲ್ಲ. ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಯಾರೋ ಮಾಡ್ತಾರೆ ಎನ್ನುವ ಸಲುವಾಗಿ, ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಚಾರ್ಜ್ ಶೀರ್ಟ್ನಲ್ಲಿ ಕಾಂಗ್ರೆಸ್ ನಾಯಕರ ಹೆಸರು ಬೆಳಕಿಗೆ ಬಂದಿದೆ ಎಂದು ದೂರಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅವಸರವಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಬಳಿ ಸಾಕ್ಷಿ, ಪುರಾವೆ ಇದ್ದರೆ ಹಾಜರು ಪಡಿಸಬೇಕು. ಬೇರೆ ಬೇರೆ ಸರಕಾರ ಇದ್ದಾಗಲೂ ಸಿಬಿಐನಿಂದ ಸಾಕಷ್ಟು ಕೇಸ್ಗಳ ತನಿಖೆ ಆಗಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಪತ್ರ ವ್ಯವಹಾರ ಇರುತ್ತದೆ. ಅದನ್ನೇ ಇಟ್ಟುಕೊಂಡು ನೀವು ಆರೋಪ ಮಾಡುವುದು ಶೋಭೆಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಎಲ್ಲವನ್ನು ಸಂಶಯದ ದೃಷ್ಟಿಯಿಂದಲೇ ನೋಡುವುದು ಸಲ್ಲ. ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷ ಎಂದು ಗೊತ್ತಾಗುತ್ತದೆ ಎಂದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ದಿಲ್ಲಿಗೆ ಬಿಟ್ ಕಾಯಿನ್ ಸಲುವಾಗಿ ಹೋಗಿಲ್ಲ. ಬದಲಿಗೆ ರಾಜ್ಯದ ನೀರಾವರಿ ಯೋಜನೆಗಳನ್ನು ಚರ್ಚೆ ಮಾಡಲು ದಿಲ್ಲಿಗೆ ಹೋಗಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಶೆಟ್ಟರ್ ಆಕ್ಷೇಪಿಸಿದರು.