ಜೆಡಿಎಸ್ ನಂತೆ ಪ್ರಾದೇಶಿಕ ಪಕ್ಷವಾಗುವ ಸ್ಥಿತಿಗೆ ತಲುಪಿದ ಕಾಂಗ್ರೆಸ್: ಸಚಿವ ಈಶ್ವರಪ್ಪ ಟೀಕೆ
''ಸುಳ್ಳು ಹೇಳುವುದಕ್ಕೆ ನೋಬೆಲ್ ಪ್ರಶಸ್ತಿ ಇದ್ದರೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಪೈಪೋಟಿ ಇರುತ್ತಿತ್ತು''
ಮಂಡ್ಯ, ನ.21: ಕಾಂಗ್ರೆಸ್ ಪಕ್ಷ ಜೆಡಿಎಸ್ ನಂತೆ ಪ್ರಾದೇಶಿಕ ಪಕ್ಷವಾಗುವ ಸ್ಥಿತಿಗೆ ತಲುಪಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ರವಿವಾರ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಅವರನ್ನು ವಿಶ್ವವೇ ಒಪ್ಪಿಕೊಂಡಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಅವರನ್ನು ಏಕವಚನದಲ್ಲಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸುಳ್ಳು ಹೇಳುವುದಕ್ಕೆ ನೋಬೆಲ್ ಪ್ರಶಸ್ತಿ ಇದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರ ನಡುವೆ ಪೈಪೋಟಿ ಇರುತ್ತಿತ್ತು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಭಾರತ ನೂರು ಕೋಟಿ ಕೋವಿಡ್ ಲಸಿಕೆ ಹಾಕಿ ಜಗತ್ತಿನಲ್ಲೇ ಮೊದಲ ಸಾಲಿನಲ್ಲಿದೆ. ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ, ಲಸಿಕೆ ವಿಚಾರದಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಸುಳ್ಳು ಹೇಳಿದರು ಎಂದು ಅವರು ಆರೋಪಿಸಿದರು.
ತನ್ನ ಇಲಾಖೆಯಿಂದ ಮಂಡ್ಯ ಜಿಲ್ಲೆಗೆ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನವನ್ನು ನೀಡುತ್ತೇನೆ ಎಂದು ಭರವಸೆ ನೀಡಿದ ಅವರು, ಸ್ಥಳೀಯ ಸಂಸ್ಥೆ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಜು ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.