ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಡಿ.20ಕ್ಕೆ ವಿಚಾರಣೆ ನಿಗದಿಪಡಿಸಿದ ಕೋರ್ಟ್
ಫೈಲ್ ಚಿತ್ರ- ಎಂ.ಎಂ.ಕಲಬುರ್ಗಿ
ಧಾರವಾಡ, ನ.25: ಖ್ಯಾತ ಸಂಶೋಧಕ ಹಾಗೂ ಹಿರಿಯ ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಯನ್ನು ಧಾರವಾಡದ 4ನೆ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಡಿ.20 ಹಾಗೂ 21ರಂದು ನಿಗದಿಪಡಿಸಿದೆ.
ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ 6 ಆರೋಪಿಗಳ ಪೈಕಿ ನಾಲ್ವರನ್ನು ಎಸ್ಐಟಿ ಅಧಿಕಾರಿಗಳು ಧಾರವಾಡದ 4ನೆ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳಾದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ, ಬೆಳಗಾವಿಯ ಪ್ರವೀಣ ಚತುರ್ ಹಾಗೂ ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ, ನ್ಯಾಯಾಧೀಶರ ಎದುರು ಆರೋಪಿಗಳು ಹಿಂದಿ ಮತ್ತು ಮರಾಠಿಯಲ್ಲಿ ಮಾತನಾಡಿದರು. ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಕನ್ನಡದಲ್ಲಿ ಮಾತನಾಡುವಂತೆ ಸೂಚಿಸಿದರು.
ಈ ವೇಳೆ ಆರೋಪಿಗಳ ಕುಟುಂಬದವರು ಹಾಗೂ ವಕೀಲರನ್ನು ಭೇಟಿ ಮಾಡಲು ಅವಕಾಶ ಕೋರಿದರು. ಅಲ್ಲದೆ, ಧಾರವಾಡ ಕೋರ್ಟ್ನಲ್ಲೇ ವಿಚಾರಣೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಅದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರು, ಡಿ.20 ಹಾಗೂ 21ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದರು.