ಹಾಸನ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್
ಹಾಸನ: ಲಂಚ ಪಡೆಯುವಾಗ ಆಲೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ರವಿಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಉದಯಗಿರಿಯಲ್ಲಿರುವ ತಮ್ಮ ನಿವಾಸದಲ್ಲಿ 2,000 ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದೆ.
ಸರ್ಕಾರದಿಂದ ಬಿಡುಗಡೆಯಾಗಿದ್ದ ಅಂತರ್ಜಾತಿ ವಿವಾಹ ಪ್ರೋತ್ಸಾಹ ಹಣ ಬಿಡುಗಡೆ ಮಾಡಲು 3000 ಲಂಚ ಕೊಡಬೇಕು ಎಂದು ರವಿ ಕುಮಾರ್ ಬೇಡಿಕೆ ಇಟ್ಟಿದ್ದರು. ಇದರಲ್ಲಿ 1 ಸಾವಿರ ರೂ. ಲಂಚ ಹಣವನ್ನು ಸುಮಂತ್ ಎಂಬುವವರಿಂದ ಪಡೆದಿದ್ದರು ಎನ್ನಲಾಗಿದೆ.
ಉಳಿದ 2 ಸಾವಿರ ರೂ. ನೀಡುವವರೆಗೂ ಪ್ರೋತ್ಸಾಹಧನ ಬಿಡುಗಡೆ ಮಾಡಲು ರವಿಕುಮಾರ್ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಸುಮಂತ್ ಜಿಲ್ಲಾ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಡಿವೈಎಸ್ಪಿ ಸತೀಶ್, ಇನ್ ಪೆಕ್ಟರ್ ಗಳಾದ ಶಿಲ್ಪಾ ವೀಣಾ ದಾಳಿ ಕಾರ್ಯಚರಣೆ ನಡೆಸಿದ್ದಾರೆ.
Next Story