ಮೈಸೂರು: ಅಕ್ರಮ ಸಂಬಂಧ ಆರೋಪ; ಕಂಬಕ್ಕೆ ಕಟ್ಟಿಹಾಕಿ ಜೋಡಿಗೆ ಹಲ್ಲೆ
ವೀಡಿಯೊ ವೈರಲ್
ಮೈಸೂರು: ಅಕ್ರಮ ಸಂಬಂಧ ಆರೋಪದಲ್ಲಿ ಜೋಡಿಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ಸಮೀಪದ ಹೆಮ್ಮರಗಾಲದಲ್ಲಿ ನಡೆದಿದೆ.
ನಂಜನಗೂಡು ತಾಲೂಕು ಹೆಮ್ಮರಗಾಲ ಗ್ರಾಮದ ಮಹಿಳೆಯೊಬ್ಬರು ಪಕ್ಕದ ಊರಿನ ಯುವಕನೊಂದಿಗೆ ಮನೆಯಲ್ಲಿದ್ದಾಗ ಆಕೆಯ ಗಂಡ, ಮೈದುನ ಹಾಗೂ ಕೆಲ ಗ್ರಾಮಸ್ಥರು ರಾತ್ರಿ ವೇಳೆ ಮನೆಯ ಮೇಲೆ ದಾಳಿ ಮಾಡಿ ಕಂಬಕ್ಕೆ ಇಬ್ಬರನ್ನೂ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ ಗಡಿ ಯಜಮಾನರನ್ನು ಕರೆಸಿ ಕೂಟ ಸೇರಿಸಿ ನ್ಯಾಯಪಂಚಾಯತಿ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಪ್ರೇಮಿಗಳ ಈ ಬಂಧನದ ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ್, ಕೌಲಂದೆ ಪಿಎಸ್ ಐ ಮಹೇಂದ್ರ ಸೇರಿದಂತೆ ಮತ್ತಿತರು ಗ್ರಾಮಕ್ಕೆ ಧಾವಿಸಿ ಪ್ರೇಮಿಗಳ ಬಂಧನವನ್ನು ಮುಕ್ತಗೊಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿರುವ ಈಕೆ 5 ವರ್ಷಗಳಿಂದ ಗಂಡನಿಂದ ದೂರವಾಗಿ ಇದ್ದಾಳೆಂದು ಹೇಳಲಾಗಿದೆ. ಪಕ್ಕದೂರಿನ ಯುವಕನೊಂದಿಗೆ ಮನೆಯಲ್ಲೇ ಇರುವ ವಿಷಯ ತಿಳಿದ ಆಕೆಯ ಪತಿ ರವೀಂದ್ರ ಹಾಗೂ ಸಂಗಡಿಗರು ಇಬ್ಬರನ್ನೂ ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ.
ಆಕೆಯ ಪತಿ ರವಿ ಹಾಗೂ ಮೈದುನ ಚಂದ್ರು ಮತ್ತಿತರಮೇಲೆ ಪೊಲೀಸರು ಪ್ರಕರಣದಾಖಲಿಸಿದ್ದು, ರವಿ ಮತ್ತು ಚಂದ್ರು ಅವರನ್ನು ವಶಕ್ಕೆ ಪಡೆದಿದ್ದಾರೆ.