ರಾಜ್ಯದಲ್ಲಿ ಶಾಲೆ-ಕಾಲೇಜು ಮುಚ್ಚುವುದಿಲ್ಲ: ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ನ.29: ಜಾಗತಿಕ ಮಟ್ಟದಲ್ಲಿ ಪತ್ತೆಯಾದ ಕೊರೋನ ಹೊಸ ತಳಿಯು ಪತ್ತೆಯಾಗಿದೆ. ಆದರೆ, ಶಾಲೆ ಆರಂಭವಾದ ದಿನದಿಂದ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಸೋಂಕು ಹರಡಿಲ್ಲ. ಆದುದರಿಂದ ಶಾಲೆಗಳನ್ನು ಸದ್ಯಕ್ಕೆ ಮುಚ್ಚುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ಹೊಸ ತಳಿಯ ಭೀತಿ ಹೆಚ್ಚಾಗುತ್ತಿದೆ. ರಾಜ್ಯಕ್ಕೆ ವೈರಸ್ ಬಾರದಂತೆ ರಾಜ್ಯ ಸರಕಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದುದರಿಂದ ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಮುಚ್ಚುತ್ತಿಲ್ಲ. ಸೋಂಕು ಉಲ್ಬಣವಾದರೆ ಸರಕಾರದ ಸಲಹೆ ಪಡೆದು ಶಾಲೆಗಳನ್ನು ಮುಚ್ಚಲಾಗುತ್ತದೆ. ಹಾಗಾಗಿ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಆದುದರಿಂದ ಶಾಲೆಗಳನ್ನು ಸದ್ಯಕ್ಕೆ ಮುಚ್ಚುತ್ತಿಲ್ಲ ಎಂದು ಅವರು ಸ್ವಷ್ಟಪಡಿಸಿದ್ದಾರೆ.
ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಯಾವುದೇ ಭಯಪಡುವ ಅಗತ್ಯವಿಲ್ಲ. ಶಾಲೆಗಳನ್ನು ಮುಚ್ಚಬೇಕಾದರೆ ಸರಕಾರದ ಸಲಹೆಗಳು ಅಗತ್ಯವಾಗಿ ಬೇಕಾಗಿರುತ್ತದೆ ಎಂದು ಅವರು ಹೇಳಿದರು.