ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಫಲಿತಾಂಶ ಶೀಘ್ರ ದೊರೆಯಲು ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಡಿ.2: ಕೊರೋನ ಪರೀಕ್ಷೆ ಸಂಬಂಧ ವಿಮಾನ ನಿಲ್ದಾಣಗಳಲ್ಲಿ ಸಿದ್ಧತೆ ನಡೆದಿದೆ. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರಿಗೆ ತಪಾಸಣೆ, ಪರೀಕ್ಷೆ ಬಗ್ಗೆ ಸೂಚನೆ ನೀಡಲಾಗಿದೆ. ಪರೀಕ್ಷೆ ಮುಗಿದ 3 ಅಥವಾ 4 ಗಂಟೆಯೊಳಗೆ ಫಲಿತಾಂಶ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣಗಳಲ್ಲಿ ಅಬೋಟ್ ಮತ್ತು ಆರ್ಟಿಪಿಸಿಆರ್ ಎಂಬ ಎರಡು ರೀತಿಯ ಪರೀಕ್ಷೆಗಳಿವೆ. ಅಬೋಟ್ ಪರೀಕ್ಷೆಗೆ ಕೇಂದ್ರ ಸರಕಾರ 3,000 ರೂ. ನಿಗದಿಪಡಿಸಿದೆ ಎಂದರು.
ಅಬೋಟ್ನಿಂದ ಕೇವಲ ಅರ್ಧ ಅಥವಾ 1 ಗಂಟೆಯೊಳಗೆ ಫಲಿತಾಂಶ ಪಡೆಯಬಹುದು. ಅಬೋಟ್ ಪರೀಕ್ಷೆಯಲ್ಲಿ ನಿಖರತೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಅಬೋಟ್ ಕೂಡ ಆರ್ಟಿಪಿಸಿಆರ್ ನಷ್ಟೇ ನಿಖರತೆ ಹೊಂದಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ 500 ರೂ. ಶುಲ್ಕವಿದೆ. ಈ ಪರೀಕ್ಷೆ ನಡೆಸಿದ 3 ರಿಂದ 4 ಗಂಟೆಯೊಳಗೆ ಫಲಿತಾಂಶ ದೊರೆಯುತ್ತದೆ. ಇಡೀ ಸಮುದಾಯಕ್ಕೆ ವೈರಸ್ ಹರಡಬಾರದು ಎಂಬುದು ಸರಕಾರದ ಉದ್ದೇಶ. ಕಂಪೆನಿ ಉದ್ಯೋಗಿಗಳು ಪರೀಕ್ಷೆ ಮಾಡಿಸಿಕೊಳ್ಳುವ ಮುನ್ನ ಮನೆಗೆ ಬಿಟ್ಟುಬಿಡಿ, ಆಮೇಲೆ ಟ್ರ್ಯಾಕ್ ಮಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಸರಕಾರಕ್ಕೆ ಬಹಳ ಅನುಭವ ಆಗಿದೆ. ಹೀಗಾಗಿ ಈಗಿರುವ ಕ್ರಮಗಳಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಬುಧವಾರ ನಡೆದ ಕೋವಿಡ್ ವಿಶೇಷ ಲಸಿಕೆ ಮೇಳದಲ್ಲಿ 9.50 ಲಕ್ಷ ಡೋಸ್ ಲಸಿಕೆ ನೀಡಿದ್ದು, ಉತ್ತಮವಾಗಿ ಲಸಿಕಾಕರಣ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ಡೋಸ್ ಪಡೆದವರ ಪ್ರಮಾಣ ಶೇ.62ಕ್ಕೆ ಏರಿದೆ. ಮೊದಲ ಡೋಸ್ ಪಡೆದವರ ಪ್ರಮಾಣ ಶೇ.92ಕ್ಕೆ ತಲುಪಿದೆ. ನಿನ್ನೆವರೆಗೆ ಒಟ್ಟು 7.50 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಲಸಿಕೆ ನೀಡುವಲ್ಲಿ 2 ಅಥವಾ 3 ನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ವಿಶೇಷ ಯೋಜನೆಗಳಿಗೆ ಬಹಳ ಒತ್ತು ನೀಡುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.
ಮುಂದುವರಿದ ದೇಶಗಳಲ್ಲಿ ಕೂಡ ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚು ರೋಗ ನಿರೋಧಕ ಶಕ್ತಿ ಪಡೆಯಲು ಎರಡೂ ಡೋಸ್ಗಳನ್ನು ಪಡೆಯಬೇಕು ಎಂದು ಅವರು ತಿಳಿಸಿದರು.
ಲಸಿಕೆಯ ಒಂದು ಡೋಸ್ ಪಡೆದರೆ ಸ್ವಲ್ಪ ರೋಗ ನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿಗಾಗಿ ಹಾಗೂ ವೈರಾಣು ವಿರುದ್ಧ ಸದೃಢವಾಗಿ ಹೋರಾಡಲು 2 ಡೋಸ್ ತೆಗೆದುಕೊಳ್ಳಬೇಕು. ಒಂದು ಕಣ್ಣಿದ್ದರೆ ಕಾಣಿಸುತ್ತದೆ. ಆದರೆ ಎರಡೂ ಕಣ್ಣುಗಳಿದ್ದರೆ ಸಂಪೂರ್ಣ ದೃಷ್ಟಿ ಸಿಗುತ್ತದೆ. ಹಾಗೆಯೇ ಕೊರೋನ ಲಸಿಕೆಯ 2 ಡೋಸ್ ತೆಗೆದುಕೊಂಡರೆ ಸಂಪೂರ್ಣ ರೋಗ ನಿರೋಧಕ ಶಕ್ತಿ ಸಿಗುತ್ತದೆ ಎಂದು ಸುಧಾಕರ್ ಹೇಳಿದರು.
ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಶಾಪಿಂಗ್ ಮಾಲ್ಗಳಿಗೆ ಪ್ರವೇಶಿಸುವಂತೆ ನಿಯಮ ರೂಪಿಸುವಂತೆ ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ದಿಲ್ಲಿ ಪ್ರವಾಸ ಮುಗಿಸಿ ಬಂದ ನಂತರ ಈ ಕುರಿತು ಚರ್ಚಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.