ಡಿ.10ರ ಬಳಿಕ ಸಂಪುಟ ಪುನರ್ ರಚನೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ಡಿ. 3: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಕ್ರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದು, ಡಿ.10ರ ಬಳಿಕ ಸಂಪುಟ ಪುನರ್ ರಚನೆಯಾಗಲಿದೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟದ ಎಲ್ಲ ಸಚಿವರ ಕಾರ್ಯವೈಖರಿಯ ಬಗ್ಗೆ ವರಿಷ್ಟರು ಮಾಹಿತಿ ಪಡೆದಿದ್ದು, ಕೆಲ ಸಚಿವರು ವಿಧಾನಸೌಧಕ್ಕೆ ಬರುವುದಿಲ್ಲ. ಶಾಸಕರ ಮೊಬೈಲ್ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಆದುದರಿಂದ ಸಿಎಂ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸಂಪುಟ ಪುನರ್ ರಚನೆ ಮಾಡುವುದು ಸೂಕ್ತ' ಎಂದು ತಿಳಿಸಿದರು.
ಸಂಪುಟದಲ್ಲಿನ ಕೆಲ ಸಚಿವರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಸಿಎಂ ಬೊಮ್ಮಾಯಿ ಅವರ ಬಾಲಂಗೋಚಿಯಂತೆ ತಿರುಗಾಡುತ್ತಿದ್ದಾರೆ. ಸಿಎಂಗೆ ಅವರ ಕೆಲಸ ಮಾಡಲು ಬಿಡಲಿ. ಕೆಲವು ಸಚಿವರು ಜಿಲ್ಲೆಗಳಲ್ಲಿ ಕೆಲಸ ಮಾಡುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಯತ್ನಾಳ್ ಇದೇ ವೇಳೆ ನುಡಿದರು.