ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರ: ಸರಕಾರ ಮರುಪರಿಶೀಲನೆ ನಡೆಸಬೇಕು ಎಂದ ಶೋಭಾ ಕರಂದ್ಲಾಜೆ
''ಮೊಟ್ಟೆ ಬದಲು ತಾಯಿ ಕೈಗೆ ದುಡ್ಡುಕೊಟ್ಟರೆ ಒಳ್ಳೆಯದು''
ಚಿಕ್ಕಮಗಳೂರು: ತಾಯಿಗಿಂತ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವವರು ಯಾರೂ ಇಲ್ಲ, ಮಕ್ಕಳ ಆಹಾರದ ವಿಚಾರ ತಾಯಿಗೆ ಬಿಡಬೇಕು. ಮೊಟ್ಟೆ ಬದಲು ತಾಯಿ ಕೈಗೆ ದುಡ್ಡುಕೊಟ್ಟರೇ ಒಳ್ಳೆಯದು, ಈ ಬಗ್ಗೆಯೂ ಚರ್ಚೆಯಾಗಬೇಕು ಎಂದು ಕೃಷಿ ಮತ್ತು ರೈತಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶುಕ್ರವಾರ ಮೂಡಿಗೆರೆ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರ ಪದ್ಧತಿ ಅವರವರ ಆಯ್ಕೆಯಾಗಿದೆ. ಈ ವಿಚಾರದಲ್ಲಿ ಒತ್ತಡ ಹೇರುವುದು ಸರಿಯಲ್ಲ, ಸರಕಾರದ ಮೇಲೆ ಯಾವುದೇ ವ್ಯಕ್ತಿ ಒತ್ತಡ ತಂದು ಬದಲಾಯಿಸಲೂ ಆಗುವುದಿಲ್ಲ, ಮೊಟ್ಟೆ ಕೊಡುವುದರಿಂದ ಕೆಲ ಸಮಾಜಕ್ಕೆ ನೋವಾಗುತ್ತಿರುವುದು ನಿಜ ಎನ್ನುವುದಾದರೆ ಸರಕಾರ ಇದನ್ನು ಮರುಪರಿಶೀಲನೆ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.
ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಪತನದಲ್ಲಿ ಭಾರತ ಸೇನೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಮತ್ತು 11ಜನ ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಪ್ರಕರಣದ ತನಿಖೆ ನಡೆಸಲು ಕೇಂದ್ರ ಸರಕಾರ ತಂಡವೊಂದನ್ನು ರಚಿಸಿದ್ದು, ಶೀಘ್ರ ತನಿಖಾ ವರದಿ ಬರಲಿದೆ ಎಂದು ಹೇಳಿದರು.
ಘಟನೆ ನಂತರ ಹೆಲಿಕಾಪ್ಟರ್ ಬ್ಲಾಕ್ಬಾಕ್ಸ್ ದೊರೆತಿದೆ. ಅದರಲ್ಲಿ ಹೆಚ್ಚಿನ ಮಾಹಿತಿಸಿಗುವ ಸಾಧ್ಯತೆಇದೆ. ಬದುಕಿರುವ ಸೇನಾನಿಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದ ಅವರು, ಮೃತಕಟುಂಬದವರ ಜೊತೆ ಸರಕಾರ ಮತ್ತು ಇಡೀ ದೇಶವೇ ಇದೆ. ಸೂಕ್ತ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ಘಟನೆ ಸತ್ಯಾಸತ್ಯತೆ ಶೀಘ್ರವೇ ತಿಳಿದು ಬರಲಿದೆ ಎಂದರು.