ಬೆಳೆ ಹಾನಿ ಪರಿಹಾರ ಡಿಸೆಂಬರ್ ಅಂತ್ಯಕ್ಕೆ ಪಾವತಿ: ಕಂದಾಯ ಸಚಿವ ಆರ್. ಅಶೋಕ್
ಬೆಳಗಾವಿ , ಡಿ. 20: ಬೆಳೆ ಹಾನಿಗೆ ಒಳಗಾದ ರೈತರಿಗೆ ಡಿಸೆಂಬರ್ ಅಂತ್ಯದೊಳಗೆ ಪರಿಹಾರ ಒದಗಿಸಲಾಗುವುದು. ಮನೆ ಹಾನಿಗೆ ಒಳಗಾದವರಿಗೆ ನಿಯಮಾನುಸಾರ ಪರಿಶೀಲಿಸಿ 2022ರ ಜನವರಿ 15 ಒಳಗಾಗಿ ಪಾವತಿಸಲು ಕಾಲಾವಧಿ ನಿಗದಿ ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸೋಮವಾರ ಬಿಜೆಪಿ ಸದಸ್ಯ ಮಹಾಂತೇಶ ದೊಡ್ಡಗೌಡರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಿತ್ತೂರು ತಾಲೂಕಿನಲ್ಲಿ ಬೆಳೆಹಾನಿಗೆ ಒಳಗಾದ 877 ಅರ್ಹರಿಗೆ 26.79 ಲಕ್ಷ ರೂ. ಹಾಗೂ ಬೈಲಹೊಂಗಲ ತಾಲೂಕಿನ 5147 ಅರ್ಹರಿಗೆ 562.70 ಲಕ್ಷ ರೂ.ಪಾವತಿಸಲಾಗಿದೆ. ಎ ಮತ್ತು ಬಿ ವರ್ಗದ ಮನೆ ಹಾನಿಗೆ ಮೊದಲ ಕಂತಿನಲ್ಲಿ ತಲಾ 95 ಸಾವಿರ ರೂ.ಹಾಗೂ ಸಿ ವರ್ಗದ ಮನೆಗಳಿಗೆ ಒಂದೇ ಕಂತಿನಲ್ಲಿ ತಲಾ 50 ಸಾವಿರ ರೂ.ಪಾವತಿಸಲು ಸೂಚಿಸಿ ಅನುದಾನ ಬಿಡುಗಡೆ ಮಾಡಲಾಗಿದೆ.
ಮೂಲಭೂತ ಸೌಕರ್ಯಗಳ ತುರ್ತು ದುರಸ್ತಿಗೆ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.