ಮಡಿಕೇರಿ: ಮೈದಾನದಲ್ಲಿ ಆಡುತ್ತಿರುವಾಗಲೇ ಹೃದಯಾಘಾತದಿಂದ ಹಾಕಿಪಟು ನಿಧನ
ಮಡಿಕೇರಿ: ಮೈದಾನದಲ್ಲಿ ಆಡುತ್ತಿರುವಾಗಲೇ ಹಾಕಿಪಟುವೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಮೂರ್ನಾಡುವಿನಲ್ಲಿ ನಡೆದಿದೆ.
ತೊತ್ತಿಯಂಡ ವಿಟಲ್ ದೇವಯ್ಯ ಅವರ ಪುತ್ರ ತೊತ್ತಿಯಂಡ ಸೋಮಯ್ಯ(22) ಮೃತಪಟ್ಟ ಯುವಕ.
ಮೂರ್ನಾಡುವಿನ ಲಾಲುಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ಚೌರೀರ ಹಾಕಿ ಟೂರ್ನಿ ಸಂದರ್ಭ ಕುಸಿದು ಬಿದ್ದ ಇವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಮೂರ್ನಾಡು ಬಲಮುರಿ ಗ್ರಾಮ ನಿವಾಸಿ ತೊತ್ತಿಯಂಡ ವಿಠಲ್ ದೇವಯ್ಯ ಅವರ ಪುತ್ರ ಸೋಮಯ್ಯ ಅವರು ಶನಿವಾರ ನಡೆಯುತ್ತಿದ್ದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಗಂಟೆಯ ವೇಳೆಗೆ 10ನೇ ಪಂದ್ಯವಾಗಿ ಬಟ್ಟೀರ ಹಾಗೂ ತೊತ್ತಿಯಂಡ ಕುಟುಂಬಗಳ ನಡುವೆ ಮೈದಾನ 2ರಲ್ಲಿ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಸೋಮಯ್ಯ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಕೊಡಗಿನ ಕ್ರೀಡಾಭಿಮಾನಿಗಳು ಹಾಗೂ ಚೌರೀರ ಹಾಕಿ ಟೂರ್ನಿ ಆಯೋಜಕರು ಸೋಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.