'ಆಮಿಷಕ್ಕಾಗಿ ದಲಿತರು ಮತಾಂತರವಾಗುತ್ತಿದ್ದಾರೆ' ಹೇಳಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ,ಸ್ಪೀಕರ್ ಕಾಗೇರಿ ವಿರುದ್ಧ ದೂರು
ರಾಯಚೂರು, ಡಿ.26: ದಲಿತ ಸಮುದಾಯ ಆಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಇಲ್ಲಿನ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ಅವರು ದೂರು ನೀಡಿದ್ದು, ಮತಾಂತರ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ, ಹಣದ ಆಮಿಷಕ್ಕೆ ಎಸ್ಸಿ, ಎಸ್ಟಿ ಜನಾಂಗ ಮತಾಂತರವಾಗುತ್ತಿದ್ದಾರೆ ಎಂದು ಸದನದಲ್ಲಿ ಸ್ಪೀಕರ್, ಗೃಹ ಸಚಿವರು ನೀಡಿದ ಹೇಳಿಕೆ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಕಾಯ್ದೆಯಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದ ಹೆಸರು ಪ್ರಸ್ತಾಪಿಸಿ ಅವಮಾನ ಮಾಡಿದ್ದಾರೆ. ಸ್ಪೀಕರ್ ಮತ್ತು ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆರ್.ಮಾನಸಯ್ಯ ದೂರಿನಲ್ಲಿ ಆಗ್ರಹಿಸಿದ್ದಾರೆ.
ಆರ್.ಮಾನಸಯ್ಯ ನೀಡಿದ ದೂರಿಗೆ ಪೊಲೀಸರಿಂದ ಹಿಂಬರಹ ನೀಡಲಾಗಿದ್ದು, ದೂರಿನಲ್ಲಿನೀಡಿದ ಅಂಶಗಳು ಶಾಸಕಾಂಗ ಸಭೆಯಲ್ಲಿ ನಡೆದ ಕಾರ್ಯಕಲಾಪಗಳಾಗಿದ್ದು, ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲವೆಂದು ಉಲ್ಲೇಖಿಸಲಾಗಿದೆ.