ಸಚಿವ ಸ್ಥಾನ ಬಿಟ್ಟು ಕೊಡಲು ನಾನು ಸಿದ್ಧ: ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ
ಹುಬ್ಬಳ್ಳಿ: 'ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಸಚಿವರು ಸ್ವಯಂ ಸ್ಫೂರ್ತಿಯಿಂದ ರಾಜೀನಾಮೆ ನೀಡಿ ಹೊಸ ಶಾಸಕರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
'ಸಂಪುಟದಿಂದ ನನ್ನನ್ನು ತೆಗೆಯುವುದಾದರೆ ಮೊದಲು ನಾನೇ ತಯಾರಿದ್ದೇನೆ, ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ' ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ರಾಜಕೀಯದಲ್ಲಿ ಯಾವುದೇ ಸ್ಥಾನಮಾನ ಬಹಳ ಮಹತ್ವದ್ದು, ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೆಯದು, ಕೆಟ್ಟದ್ದು ಎಂಬುವುದು ರಾಜಕೀಯದಲ್ಲಿ ಇರುವವರಿಗೆ ಗೊತ್ತು. ಪಕ್ಷಕ್ಕೆ ಒಳ್ಳೆಯದು ಆಗಬೇಕೆಂದು ವರಿಷ್ಠರು ತೀರ್ಮಾನಿಸಿದರೆ ಅವರ ಸೂಚನೆಯನ್ನು ಪಾಲಿಸಲು ನಾನು ಸದಾ ಸಿದ್ಧ ಎಂದು ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿವಮೊಗ್ಗದಲ್ಲಿ ಜ.5ರಂದು ರಾಜ್ಯ ಮಟ್ಟದ ಹಿಂದುಳಿದ ವರ್ಗದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಜವಾಬ್ದಾರಿ ನನಗೆ ನೀಡಿದ್ದಾರೆ ಎಂದು ಸಚಿವ ಈಶ್ವರಪ್ಪ ಇದೇ ವೇಳೆ ತಿಳಿಸಿದರು.