ಪಿಎಸ್ಐ ಪರೀಕ್ಷೆ: ಚಿಕ್ಕಬಳ್ಳಾಪುರದ ರೈತನ ಪುತ್ರಿ ಅಮ್ರೀನ್ ತಾಜ್ ಗೆ 76 ನೇ ರ್ಯಾಂಕ್
ಅಮರೀನ್ ತಾಜ್ ಗೆ
ಚಿಕ್ಕಬಳ್ಳಾಪುರ, ಜ.20. ಗ್ರಾಮೀಣ ಭಾಗದ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 76ನೇ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದ ಅಮ್ರೀನ್ ತಾಜ್ ಸೈಯದ್ ಬಶೀರ್ ಮತ್ತು ಜೈನಾಬ್ ದಂಪತಿಯ ಪುತ್ರಿ.
ತಂದೆ ತಾಯಿ ಇಬ್ಬರೂ ಕೃಷಿಕರಾಗಿದ್ದು, ಅಮ್ರೀನ್ ಅವರ ಹಿರಿಯ ಸಹೋದರ ಸಾದಿಕ್ ಪಾಶಾ ಎಸಿಬಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸಿದ ಪೂರ್ವ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಅಮರೀನ್ ತನ್ನ ನಾಗರಿಕ ಸೇವಾ ತರಬೇತಿಗಾಗಿ ದೆಹಲಿಗೆ ತೆರಳುವ ಮೊದಲು ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿದ್ದರು.
"ನನ್ನ ಸಹೋದರನ ಪೊಲೀಸ್ ಪಯಣ ಮತ್ತು ಸಮಾಜದ ಕಡೆಗೆ ಅವರಿಗಿರುವ ನಿಸ್ವಾರ್ಥ ಸೇವೆ ಸಹಜವಾಗಿಯೇ ನನ್ನನ್ನು ಪೋಲೀಸ್ ಸೇವೆಗೆ ಆಕರ್ಷಿಸಿತು ಮತ್ತು ನಾನು ಅವರ ಹೆಜ್ಜೆಗಳನ್ನು ಅನುಸರಿಸಿದೆ" ಎಂದು ಅಮರೀನ್ ವಾರ್ತಾ ಭಾರತಿಗೆ ತಿಳಿಸಿದರು.
“ನನ್ನ ಹೆತ್ತವರಿಗೆ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದರೆ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸಿಸಿದ್ದಾರೆ. ಹಾಗಾಗಿ ನನ್ನ ಯಶಸ್ಸಿನ ಎಲ್ಲಾ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ'' ಎಂದು ಅವರು ಹೇಳಿದರು.