ಕನ್ನಡ ಚಿತ್ರರಂಗದ ನೇತೃತ್ವ ಶಿವರಾಜ್ಕುಮಾರ್ ವಹಿಸಲಿ: ಮಧು ಬಂಗಾರಪ್ಪ
ಬೆಂಗಳೂರು, ಜ.25: ಎಲ್ಲರ ಅಭಿಪ್ರಾಯದಂತೆ ಕನ್ನಡ ಚಿತ್ರರಂಗದ ನೇತೃತ್ವವನ್ನು ನಟರಾದ ಶಿವರಾಜ್ಕುಮಾರ್ ಅವರೆ ಪಡೆಯಬೇಕು, ಅವರಿಗೆ ಎಲ್ಲರೂ ಬೆಂಬಲ ನೀಡುತ್ತಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿನಿಮಾರಂಗದಲ್ಲಿ ಹಲವು ಗಣ್ಯರಿದ್ದಾರೆ. ಸಮಸ್ಯೆ ಬಂದಾಗ ಎಲ್ಲರೂ ಚರ್ಚಿಸುತ್ತಾರೆ. ಆದರೆ, ನೇತೃತ್ವವನ್ನು ಶಿವಣ್ಣನವರೇ ತೆಗೆದುಕೊಳ್ಳಬೇಕೆಂದು ಶಿವಣ್ಣನವರ ಬಗ್ಗೆ ಎಲ್ಲರಿಗೂ ಮೆಚ್ಚುಗೆಯಿದೆ ಎಂದರು.
ಈ ಹಿಂದೆ ಡಾ.ರಾಜ್ಕುಮಾರ್, ಅಂಬರೀಷ್ ಎಲ್ಲರೂ ಚಿತ್ರರಂಗದ ನೇತೃತ್ವ ವಹಿಸಿದ್ದರು. ಶಿವಣ್ಣನಿಗೆ ಎಲ್ಲರೂ ಬೆಂಬಲ ಕೊಡುತ್ತಾರೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಚಿತ್ರರಂಗದ ಎಲ್ಲರ ಅಭಿಪ್ರಾಯ ಎಂದು ತಿಳಿಸಿದರು.
ಗೀತಾ ಶಿವರಾಜ್ಕುಮಾರ್ ಸ್ಪರ್ಧೆ ವಿಚಾರವಾಗಿ ಎಲ್ಲವೂ ಈಗಾಗಲೇ ನಿರ್ಧಾರವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು. ಅದರ ಬಗ್ಗೆ ನಾನು ಈಗ ಏನೂ ಹೇಳಲ್ಲ, ಮುಂದೆ ಎಲ್ಲವೂ ನಿಮಗೆ ಗೊತ್ತಾಗಲಿದೆ. ಜತೆಗೆ ಎಲ್ಲಿ ಏನು ಎನ್ನುವುದು ತಿಳಿಯಲಿದೆ ಎಂದರು.