ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ನೇತೃತ್ವದಲ್ಲಿ ಜೆಡಿಎಸ್ ನೂತನ ಕೋರ್ ಕಮಿಟಿ ರಚನೆ
ಬೆಂಗಳೂರು, ಜ.26; ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿರುವ ನೂತನ ಕೋರ್ ಕಮಿಟಿಯ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಬುಧವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು 20 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಅಧ್ಯಕ್ಷರಾಗಿ ಬಂಡೆಪ್ಪ ಕಾಶೆಂಪೂರ್ ಹಾಗೂ ಸದಸ್ಯರಾಗಿ ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಪ್ರಜ್ವಲ್ ರೇವಣ್ಣ, ಕುಪೇಂದ್ರ ರೆಡ್ಡಿ, ಮುಹಮ್ಮದ್ ಝಫ್ರುಲ್ಲಾಖಾನ್, ಎಂ.ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪನಾಯಕ, ಬಿ.ಎಂ.ಫಾರೂಕ್, ಕೆ.ಎ.ತಿಪ್ಪೇಸ್ವಾಮಿ(ಸದಸ್ಯರು ಮತ್ತು ಸಂಚಾಲಕ), ವೈಎಸ್ವಿ ದತ್ತ, ಕೆ.ಎಂ.ತಿಮ್ಮರಾಯಪ್ಪ, ಟಿ.ಎ.ಶರವಣ, ಶಾರದಾ ಪೂರ್ಯನಾಯಕ್, ನಾಸೀರ್ ಭಗವಾನ್, ಹನುಮಂತಪ್ಪ ಬಸಪ್ಪ ಮಾವಿನಮರದ, ರೂತ್ ಮನೋರಮಾ, ಸುಧಾಕರ್ ಎಸ್.ಶೆಟ್ಟಿ, ವಿ.ನಾರಾಯಣಸ್ವಾಮಿ ಹಾಗೂ ಸಮೃದ್ಧಿ ಮಂಜುನಾಥ್ರನ್ನು ನೇಮಕ ಮಾಡಲಾಗಿದೆ.
ವಿಶೇಷ ಆಹ್ವಾನಿತರಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.
ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ: ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್ ಪರಿಶಿಷ್ಠ ಪಂಗಡ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇಮಕ ಮಾಡಿದ್ದಾರೆ.