ಭಾಷಾ ಭದ್ರತೆ-ಕೇರಳ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ: ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್
ಬೆಂಗಳೂರು, ಜ. 28: ಕೇರಳ ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ, ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯನ್ನು ಕಲಿಯುವುದನ್ನು ನಿರ್ಬಂಧಿಸುವುದಿಲ್ಲ ಅಥವಾ ಮಲಯಾಳವನ್ನು ಕಲಿಯಲು ಒತ್ತಾಯಿಸುವುದಿಲ್ಲ ಮತ್ತು ಅಂತಹ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ' ಎಂದು ಕೇರಳ ಸರಕಾರ ಸ್ಪಷ್ಟಪಡಿಸಿದೆ ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಕೇರಳದ ವಿವಿಧ ಇಲಾಖೆಗಳಲ್ಲಿ ಒದಗಿಸಬೇಕಾದ ಭಾಷಾ ಭದ್ರತೆ ಬಗ್ಗೆ ಕೇರಳ ಸರಕಾರಕ್ಕೆ ಬರೆದಿದ್ದ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕೇರಳ ಸರಕಾರವು ಕೇಂದ್ರದ ಅಲ್ಪಸಂಖ್ಯಾತ ಮಂತ್ರಾಲಯದ ಸಹಾಯಕ ಕಮಿಷನರ್ ಅವರಿಗೆ ಪತ್ರವನ್ನು ಬರೆದು ನಮ್ಮ ಪ್ರಾಧಿಕಾರಕ್ಕೆ ಅದರ ಪ್ರತಿ ಕಳುಹಿಸಿದ್ದಾರೆ. ಇದು ನಮ್ಮ ಪ್ರಾಧಿಕಾರದ ಪ್ರಯತ್ನಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.
ಕಾಸರಗೋಡಿನ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಕನ್ನಡ ಭಾಷೆ ನಿಭಾಯಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಮಲಯಾಳಂ ಬಲ್ಲ ಗುಮಾಸ್ತರನ್ನು ನೇಮಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುಂದು-ಕೊರತೆಗಳನ್ನು ನೋಡಿಕೊಳ್ಳಲು ಹೆಚ್ಚುವರಿ ಎಸ್.ಪಿ.ಹರಿಶ್ಚಂದ್ರ ನಾಯ್ಕ್ ಅವರನ್ನು ನೇಮಿಸಲಾಗಿದೆ. ಕನ್ನಡ ಮಾತನಾಡುವ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಪ್ರತಿ ಪೊಲೀಸ್ ಠಾಣೆಗೆ ಕನ್ನಡ ಭಾಷೆಬಲ್ಲ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಮತ್ತು ಕನ್ನಡ ಭಾಷೆಯಲ್ಲಿ ಬರುವ ದೂರುಗಳನ್ನು ಔಪಚಾರಿಕವಾಗಿ ಪರಿಹರಿಸಲಾಗುತ್ತದೆ ಮತ್ತು ಅಂತಹ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಭಾಷಾಅಲ್ಪಸಂಖ್ಯಾತರ ಸಹಾಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆಗಳ ಸೈನ್ ಬೋರ್ಡ್ಗಳಲ್ಲಿ ಪೊಲೀಸ್ ಠಾಣೆಗಳ ಹೆಸರನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಕಾಸರಗೋಡು ಮತ್ತು ಮಂಜೇಶ್ವರA ತಾಲೂಕು ವ್ಯಾಪ್ತಿಯಲ್ಲಿ ಮತ್ತು ಕೇರಳದ ಎಲ್ಲ ಅಕ್ಷಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕನ್ನಡದಲ್ಲಿ ದರ ಪಟ್ಟಿಯನ್ನು ಪ್ರದರ್ಶಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಇ-ಡಿಸ್ಟ್ರಿಕ್ಟ್ ಪೋರ್ಟಲ್ನಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬಗ್ಗೆ ಕೇರಳ ರಾಜ್ಯದ ಐಟಿ ಮಿಷನ್ ನಿರ್ದೇಶಕರಿಗೆ ತಿಳಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಕರ್ನಾಟಕದ ಗಡಿ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯಲ್ಲಿ ಪ್ರವೀಣರಾಗಿರುವ ಶಿಕ್ಷಕರ ಕೊರತೆಯಿದೆ ಎಂದು ವರದಿ ಮಾಡಿದ್ದಾರೆ. ಅಂತಹ ಕಡೆಗಳಲ್ಲಿ ಕನ್ನಡ ಬಾರದ ಶಿಕ್ಷಕರ ನೇಮಕವನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಲಯಾಳಂ ಭಾಷೆ(ಕಡ್ಡಾಯ ಭಾಷೆ) ಮಸೂದೆ-2017 ಘೋಷಿಸುವ ಸರಕಾರಿ ಆದೇಶದ ಪ್ರಕಾರ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನೂ ಕಲಿಸಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಜೊತೆಗೆ ಮಲಯಾಳಂ ಕಲಿಯುವುದು ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಮತ್ತು ಅವರ ಉದ್ಯೋಗಾವಕಾಶಗಳನ್ನು ಸುಲಭಗೊಳಿಸಲು ಅನುಕೂಲವಾಗುತ್ತದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
`ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪತ್ರಕ್ಕೆ ಕೇರಳ ಸರಕಾರ ಸ್ಪಂದಿಸಿದ್ದು, ಕಾಸರಗೋಡಿನ ಕನ್ನಡಿಗರಿಗೆ ಸಂತೋಷ ಹಾಗೂ ನೆಮ್ಮದಿ ಉಂಟು ಮಾಡುವಂತಹ ಕ್ರಮಗಳನ್ನು ಕೈಗೊಂಡಿದೆ. ಇಂತಹ ಕನ್ನಡ ಪರ ನಿಲುವು ಕೈಗೊಂಡ ಕೇಂದ್ರ ಸರಕಾರದ ಅಲ್ಪಸಂಖ್ಯಾತ ಮಂತ್ರಾಲಯಕ್ಕೆ ಹಾಗೂ ಕೇರಳ ಸರಕಾರಕ್ಕೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕೃತಜ್ಞತೆ ಸಲ್ಲಿಸುತ್ತದೆ'
-ಸಿ.ಸೋಮಶೇಖರ್. ಗಡಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ