ನರಗುಂದದಲ್ಲಿ ಯುವಕನ ಹತ್ಯೆ ಪ್ರಕರಣ: ಸಮೀರ್ ಶಹಾಪುರ ಮನೆಗೆ ಜಿಲ್ಲಾಧಿಕಾರಿ ಭೇಟಿ
ಸಮೀರ್ ಶಹಾಪುರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ
ನರಗುಂದ: ಪಟ್ಟಣದಲ್ಲಿ ಇತ್ತೀಚೆಗೆ ಸಂಘಪರಿವಾರ ಕಾರ್ಯಕರ್ತರಿಂದ ಹತ್ಯೆಗೀಡಾದ ಯುವಕನ ಮನೆಗೆ ಜಿಲ್ಲಾಧಿಕಾರಿ ಎಮ್. ಸುಂದರೇಶ್ ಬಾಬು ಭೇಟಿ ನೀಡಿದ್ದಾರೆ.
ಜ.18ರಂದು ರಾತ್ರಿ ವೇಳೆ ಹೋಟೆಲ್ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಸಮೀರ್ ಶಹಾಪುರ ಎಂಬ ಯುವಕ ಮೃತಪಟ್ಟಿದ್ದು, ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದ.
ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಜರಂಗದಳದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದಲ್ಲಿ ಸಿಪಿಐ ನಂದೀಶ್ವರ ಕುಂಬಾರ ಅವರ ಅಮಾನತುಗೊಳಿಸಲಾಗಿದೆ.
ಇದೀಗ ಮೃತ ಯುವಕ ಸಮೀರ್ ಶಹಾಪುರ ಮನೆಗೆ ಮಂಗಳವಾರ ಭೇಟಿ ನೀಡಿರುವ ಜಿಲ್ಲಾಧಿಕಾರಿ ಎಮ್. ಸುಂದರೇಶ್ ಬಾಬು, ಯುವಕನ ಕುಟುಂಬಕ್ಕೆ ಸೂಕ್ತ ರಕ್ಷಣೆ, ಮನೆ ಸೌಕರ್ಯ ಹಾಗೂ ಯುವಕನ ಕಿರಿಯ ಸಹೋದರಿಗೆ ಉಚಿತ ಶಿಕ್ಷಣದ ಭರವಸೆಯನ್ನು ನೀಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ವೇಳೆ ನರಗುಂದ ಪುರಸಭೆ ಮುಖ್ಯ ಆಯುಕ್ತ, ತಹಶೀಲ್ದಾರ್, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.