ಹಿಜಾಬ್ ಪ್ರಕರಣಕ್ಕೆ ಬಿಜೆಪಿಯೇ ನೇರ ಹೊಣೆ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ, ಫೆ. 11: ‘ಕರ್ನಾಟಕ ರಾಜ್ಯದಲ್ಲಿನ ಹಿಜಾಬ್(ಸ್ಕಾರ್ಫ್) ಪ್ರಕರಣಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷವೇ ನೇರ ಕಾರಣ. ಇದರ ಜವಾಬ್ದಾರಿಯನ್ನು ಆ ಪಕ್ಷವೇ ಹೊರಬೇಕು' ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅದರ ಲಾಭ ಪಡೆದುಕೊಳ್ಳಲು ಹಿಜಾಬ್(ಸ್ಕಾರ್ಫ್) ವಿವಾದವನ್ನು ಹುಟ್ಟು ಹಾಕಲಾಗಿದೆ. ಶಾಂತಿಯುತವಾಗಿ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷ ಸೃಷ್ಟಿಸಲಾಗಿದೆ' ಎಂದು ದೂರಿದರು.
‘ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್ ವಿವಾದ ಕೋಮು ಸಾಮರಸ್ಯ ಕದಡುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಹಣದುಬ್ಬರ, ರೈತರ ಸಮಸ್ಯೆಗಳು, ಜಿಡಿಪಿ ಕುಸಿತ, ರಾಷ್ಟ್ರೀಯ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಯಾವುದೇ ಉತ್ತರವನ್ನು ನೀಡಿಲ್ಲ' ಎಂದು ಖರ್ಗೆ ಟೀಕಿಸಿದರು.
‘ಪ್ರಧಾನಿ ಮೋದಿ ಕೇವಲ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಆ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿದೆ. ಆದರೆ, ಅವರು ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಂತೆ ಅಧಿವೇಶನದಲ್ಲಿಯೂ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.