ದೇವೇಗೌಡರ ಬಿಟ್ಟು ರಾಜಕೀಯ ಅಸಾಧ್ಯ: ಸಿ.ಎಂ.ಇಬ್ರಾಹಿಂ
ಮಂಡ್ಯ, ಫೆ.11: ದೇವೇಗೌಡ, ಕುಮಾರಸ್ವಾಮಿ ಅವರದ್ದು, ನಮ್ಮದು ಹಳೆಯ ಸಂಬಂಧ. ಕಾಂಗ್ರೆಸ್ನವರು ಹೋಗಬೇಡಿ ಅಂತಾ ಹಿಂದೆ ಬಿದ್ದಿದ್ದಾರೆ. ಇವತ್ತು ದೇವೇಗೌಡರ ಕಡೆಗಣಿಸಿ ರಾಜಕಾರಣ ಮಾಡೋದು ಅಸಾಧ್ಯ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ನಾವು(ಕರ್ನಾಟಕ ಸರಕಾರ) ಮೋದಿ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದೇವೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ಅಂದು ದೇವೇಗೌಡರ ನಿವಾಸ ಆರೂವರೆ ಕೋಟಿ ಕನ್ನಡಿಗರಿಗೆ ಬಾಗಿಲು ತೆರೆದಿತ್ತು.
ಡಾ.ರಾಜ್ಕುಮಾರ್ಗೆ ದಾದಾಸಾಹೇಬ್ ಪಾಲ್ಕೆ ಅವಾರ್ಡ್ ಕೊಟ್ಟ ಕಾಲ ಅದು.
ಸಾಕಷ್ಟು ನೀರಾವರಿ ಯೋಜನೆ, ಮತ್ತಿತರೆ ಅಭಿವೃದ್ಧಿಗೆ ರಾಜ್ಯಕ್ಕೆ ಹಣ ಹರಿದುಬರುತ್ತಿತ್ತು. ಈಗ ನಾವು ದೆಹಲಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನನಗೆ ವ್ಯಕ್ತಿಗತವಾದಂತೆ ಬೇಡಿಕೆಗಿಂತ ರಾಜ್ಯದ ಹಿತದೃಷ್ಟಿ ಮುಖ್ಯ. ಅಂದು ದೇವೇಗೌಡರ ಮಾರ್ಗದರ್ಶನ ಪಡೆದಿದ್ದೆ. ಇಂದು ಕೂಡ ಅವರ ಮಾರ್ಗದರ್ಶನ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ದೇವೇಗೌಡರ ಗುಣಗಾನ ಮಾಡಿದರು.
ಸಿದ್ದರಾಮಯ್ಯ ಅವರು ತಮ್ಮ ಮನೆಗೆ ಊಟಕ್ಕೆ ಹೋಗುತ್ತೇನೆಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ನಮ್ಮ ಮನೆ ಸದಾ ತೆರೆದಿರುವ ದಾಸೋಹ ಭವನ. ಅವರು ಬರಲಿ, ಅವರಿಗೂ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು.
“ಕಾಂಗ್ರೆಸ್ ನಾಯಕರು ನನ್ನ ಜೊತೆ ಮಾತನಾಡುತ್ತಿದ್ದಾರೆ. ಪಕ್ಷದಲ್ಲೆ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಬಗ್ಗೆ ಕೆಲವರು ನನ್ನ ಬಳಿ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ದೆಹಲಿಯಿಂದಲೂ ಮಾತನಾಡಲು ಆಹ್ವಾನ ಬಂದಿದೆ. ನನ್ನ ಜನರ ಜತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಯಾರು ಕರೆದಿದ್ದಾರೆ, ಯಾರನ್ನು ಭೇಟಿಯಾಗಬೇಕು ಎಂಬುದನ್ನು ಈಗ ಹೇಳುವುದಿಲ್ಲ.
ದೆಹಲಿಗೆ ಹೋಗುವ ಬಗ್ಗೆ ಒಂದೆರಡು ದಿನದಲ್ಲಿ ಹೇಳುತ್ತೇನೆ. ಹೋಗಬೇಕಾ, ಬೇಡವಾ ಎಂಬುದನ್ನು ನನ್ನ ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ.”
-ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ.