ಕೋಲಾರ: ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಲಘು ಲಾಠಿಚಾರ್ಜ್
ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ಮಾಡಿದ್ದಾರೆನ್ನಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮುಳಬಾಗಿಲು ಪಟ್ಟಣದಿಂದ ಆವನಿ ಕಡೆಗೆ ಹೊರಟಿದ್ದ ಶ್ರೀರಾಮ ಶೋಭಾಯಾತ್ರೆ ಮಾರ್ಗ ಮಧ್ಯೆ ಪಟ್ಟಣದ ಜಹಾಂಗೀರ್ ಮೊಹಲ್ಲ ಬಳಿ ಕಲ್ಲು ತೂರಾಟದ ಘಟನೆ ನಡೆದಿದೆ ಎನ್ನಲಾಗಿದೆ. ಪರಸ್ಪರ ಕಲ್ಲು ತೂರಾಟದ ನಡೆದು, ಒಂದು ಬೈಕ್ ಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಹೆಚ್ವಿನ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಶೋಭಾಯಾತ್ರೆ ವೇಳೆ ಕರೆಂಟ್ ಹೋಗಿದ್ದೆ ಘಟನೆಗೆ ಕಾರಣ ಎನ್ನಲಾಗಿದ್ದು, ಘಟನೆಯಲ್ಲಿ ಐದಾರು ಕಾರುಗಳಿಗೆ ಹಾನಿಯಾಗಿದೆ.
ನಾಲ್ಕೈದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೋಲಾರ ಎಸ್ಪಿ ದೇವರಾಜ್ ತಿಳಿಸಿದ್ದಾರೆ.
Next Story