VIDEO-ಚನ್ನಕೇಶವ ಜಾತ್ರಾ ರಥೋತ್ಸವದಲ್ಲಿ ಕುರ್ಆನ್ ಪಠಣ: ಸೌಹಾರ್ದ ಸಂದೇಶಕ್ಕೆ ಸಾಕ್ಷಿಯಾದ ಬೇಲೂರು
ಬೇಲೂರು, ಎ.13: ಶೀ ಚನ್ನಕೇಶವ ರಥೋತ್ಸವದಲ್ಲಿ ಕುರ್ಆನ್ ಪಠಣ ಮಾಡಿ ಚಿಕ್ಕತೇರಿಗೆ ಚಾಲನೆ ನೀಡುವ ಮೂಲಕ, ಸೌಹಾರ್ದ ಸಂದೇಶಕ್ಕೆ ಬೇಲೂರು ಸಾಕ್ಷಿಯಾಯಿತು.
ಮುಸ್ಲಿಮ್ ಧರ್ಮಗುರು ಸಾದತ್ ಬಾಷಾ ಖಾದ್ರಿ ಕುರ್ಆನ್ ಪಾರಾಯಣ ನೆರವೇರಿಸಿದರು.
ರಾಜ್ಯದ ಕೆಲವು ಪ್ರದೇಶಗಳಲ್ಲಿ ಧರ್ಮದ ಹೆಸರಿನಲ್ಲಿ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷ ತೇರಿನ ದಿನ (ಚಿಕ್ಕತೇರು) ಕುರ್ಆನ್ ಪಠಣ ನಡೆಯುವುದರ ಬಗ್ಗೆ ಸ್ವಲ್ಪ ಚರ್ಚೆಗಳಾಗುತ್ತಿತ್ತು. ಹೀಗಾಗಿ ಬೇಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಲತಾ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದರು.
ತೇರಿನ ದಿನ ಕುರ್ಆನ್ ಪಠಣ ಮಾಡುವ ವಿಚಾರ ದೇವಾಲಯದ ಕಾರ್ಯನಿರ್ವಹಣಾ ಕೈಪಿಡಿಯಲ್ಲೇ ಇದೆ. ಚಿಕ್ಕ ತೇರಿನ ದಿನ ದೇವಾಲಯದ ಬಳಿ ನಿಂತು ಕುರ್ಆನ್ ಪಠಣ ಮಾಡಲಾಗುತ್ತದೆ. ಪ್ರತಿ ವರ್ಷವೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಆಯುಕ್ತರಿಗೆ ತಿಳಿಸಿದ್ದರು.
ಆಯುಕ್ತೆ ರೋಹಿಣಿ ಸಿಂಧೂರಿಯವರು ಧಾರ್ಮಿಕ ದತ್ತಿ ಇಲಾಖೆಯು ಸಂಪ್ರದಾಯ ಮುಂದುವರಿಸಲು ತಿಳಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಬಳಿ 100ಕ್ಕೂ ಹೆಚ್ಚು ಮಳಿಗೆ ಹಾಕಲಾಗಿದೆ. ಸುಮಾರು 15 ಜನ ಮುಸ್ಲಿಮರೂ ಕೂಡ ಅಂಗಡಿ ಹಾಕಿದ್ದಾರೆ.