ಮೈಸೂರು: ಶಾಸಕ ಜಿಗ್ನೇಶ್ ಮೇವಾನಿ ಬಂಧನ ಖಂಡಿಸಿ ದಸಂಸ ಪ್ರತಿಭಟನೆ
ಜಿಗ್ನೇಶ್ ಮೇವಾನಿ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ: ಚೋರನಹಳ್ಳಿ ಶಿವಣ್ಣ
ಮೈಸೂರು: ಗುಜರಾತ್ ನ ವಡಗಾವ್ ಕ್ಷೇತ್ರದ ದಲಿತ ಶಾಸಕ ಜಿಗ್ನೇಶ್ ಮೆವಾನಿಯರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಬಂಧನವಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪತ್ರಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಶಾಸಕ ಜಿಗ್ನೇಶ್ ಮೇವಾನಿ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ “ಗೋಡ್ಸೆಯನ್ನು ದೇವರಂತೆ ಪರಿಗಣಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ನಲ್ಲಿ ಕೋಮುಘರ್ಷಣೆಗಳ ವಿರುದ್ಧ ಶಾಂತಿ ಮತ್ತು ಸೌರ್ಹಾದತೆಗಾಗಿ ಮನವಿ ಮಾಡಬೇಕೆಂದು ಎಪ್ರಿಲ್ 18 ರಂದು ಟ್ವೀಟ್ ಮಾಡಿದ್ದನ್ನೇ ನೆಪ ಮಾಡಿಕೊಂಡು ಅವರಿಗೆ ಎಫ್ಐಆರ್ ಪ್ರತಿಯನ್ನು ನೀಡದೆ ಬಂಧಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ನೀತಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡುತ್ತಾ ಕೋಮುಗಲಭೆಗಳನ್ನು ಎಬ್ಬಿಸುವ ಗಲಭೆಕೋರರನ್ನು ಹತ್ತಿಕ್ಕದೇ ಕೋಮು ಸೌಹಾರ್ದತೆಗೆ ಮನವಿ ಮಾಡುವ ಪ್ರಗತಿಪರ ಹೋರಾಟಗಾರ ಜಿಗ್ನೇಶ್ ಮೆವಾನಿಯವರ ಬಂಧನ ಅತ್ಯಂತ ಖಂಡನೀಯ. ಭಾರತದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಇಂತಹ ಕೃತ್ಯಗಳಿಗೆ ಇತಿಶ್ರೀ ಹಾಡಿ ಸಂವಿಧಾನಾತ್ಮಕವಾಗಿ ಹಕ್ಕುಗಳನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದರು.
ಜಿಗ್ನೇಶ್ ಮೆವಾನಿಯವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಜಾಗೊಳಿಸಿ ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ, ಸಣ್ಣಯ್ಯ ಲಕ್ಕೂರು, ಉಗ್ರನರಸಿಂಹೇಗೌಡ, ಆಲಗೂಡು ಚಂದ್ರಶೇಖರ್, ಡಾ.ಹರೀಶ್ ಕುಮಾರ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್, ಪ್ರಭುಸ್ವಾಮಿ ಹಗಿನವಾಳು, ದೇವರಾಜು ಚಿಕ್ಕಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.