ಮೈಸೂರು: ಸೆಲ್ಫಿ ತೆಗೆಯುವ ವೇಳೆ ಕಪಿಲಾ ನದಿಗೆ ಬಿದ್ದು ಮಹಿಳೆ ಮೃತ್ಯು
ಪತಿ ಮತ್ತು ಪುತ್ರಿಯ ಎದುರಿಗೆ ನೀರುಪಾಲು
ಮೈಸೂರು: ಮಹಿಳೆಯೊಬ್ಬರು ಕಪಿಲಾ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ತನ್ನ ಪತಿ ಮತ್ತು ಪುತ್ರಿ ಎದುರಿಗೆ ನೀರುಪಾಲಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಲ್ಲಹಳ್ಳಿ ಬಳಿಯ ಸಂಗಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ನಂಜದೇವಪುರ ಗ್ರಾಮದ ಗಿರೀಶ್ ಅವರ ಪತ್ನಿ ಕವಿತಾ (38) ಮೃತರು ಎಂದು ತಿಳಿದುಬಂದಿ.
ದೂರ ಗ್ರಾಮದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಡಿ.ಬಿ.ನಾಗರಾಜ್ ಅವರ ಪುತ್ರಿ ಕವಿತಾ ತನ್ನ ಪತಿ ಮತ್ತು ಪುತ್ರಿಯೊಂದಿಗೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಲ್ಲಹಳ್ಳಿ ಬಳಿ ಇರುವ ಸಂಗಮ ಶ್ರೀಕ್ಷೇತ್ರದ ಮಹದೇವಾ ಗದ್ದಿಗೆಗೆ ಪೂಜೆಗೆಂದು ಹೋಗಿದ್ದಾರೆ.
ಈ ವೇಳೆ ಪೂಜೆಗೂ ಮೊದಲು ಕಪಿಲಾ ನದಿಯಲ್ಲಿ ಕಾಲು ತೊಳೆದುಕೊಂಡಿದ್ದಾರೆ. ಬಳಿಕ ತನ್ನ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭ ಕಾಲು ಜಾರಿ ಕಪಿಲಾ ನದಿಯೊಳಗೆ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಪತಿ ಮತ್ತು ಪುತ್ರಿ ಕವಿತಾ ಕಂಡು ಕೂಗಿಕೊಂಡಿದ್ದರಾದರೂ ಅಸಹಾಯಕರಾಗಿ ಕಣ್ಣೀರಿಟ್ಟಿದ್ದಾರೆ.
ನಂತರ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಬಂದು ಕವಿತಾ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಈ ವೇಳೆ ಅವರು ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.