ದೇಹ-ಮನಸ್ಸಿನ ಅಂತರ ಕಡಿಮೆ ಮಾಡಲು ಯೋಗ ಸಹಕಾರಿ: ಡಾ. ಶರಣಬಸಪ್ಪ ಪಾಟೀಲ್
ಕಲಬುರಗಿ : ಯೋಗದಿಂದ ದೇಹ ಮತ್ತು ಮನಸ್ಸಿನ ಅಂತರ ಕಡಿಮೆ ಮಾಡಿ ಮನಸ್ಸನ್ನು ಬಲಿಷ್ಠವಾಗಿಸುವುದು ಹಾಗೂ ದೇಹವನ್ನು ಸದೃಢವಾಗಿಸುವುದಾಗಿದೆ ಎಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ ಯೋಗ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಡಾ.ಶರಣಬಸಪ್ಪ ಪಾಟೀಲ್ ಹೇಲಿದರು.
ಜೂನ್ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಕೇಂದ್ರ ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲ ಕಚೇರಿಗಳಲ್ಲಿ ಸಾಮಾನ್ಯ ಯೋಗ ನಿಯಮ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ ಮೇರೆಗೆ ಮೇ.13 ರಂದು ವಾರ್ತಾ ಮತ್ತು ಪ್ರಸಾರ ಖಾತೆಯಡಿ ಬರುವ ಆಕಾಶವಾಣಿ ಕೇಂದ್ರಗಳಲ್ಲಿ ಯೋಗ ಕಾರ್ಯಕ್ರಮದನ್ವಯ ಕಲಬುರಗಿ ಆಕಾಶವಾಣಿಯಲಿ ನಡೆದ ‘ಯೋಗ ಕುರಿತ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನುದ್ಧಶಿಸಿ ಅವರು ಮಾತನಾಡಿದರು.
ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಅನುಸರಣೆಯಿಂದ ಆರೋಗ್ಯ ಪೂರ್ಣ ಬದುಕು ಸಾಧ್ಯ. ಸಮತೋಲನದ ಆಹಾರದೊಂದಿಗೆ ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಔಷಧ ರಹಿತ ಜೀವನ ಸಾಧ್ಯವಾಗುವುದಲ್ಲದೆ ಒಳ್ಳೆಯ ಮಾತು, ವಿಚಾರ, ಕೆಲಸ ವ್ಯಾಯಾಮ, ಯೋಗ ಆಹಾರ, ನೀರಿನ ಸೇವನೆಯೇ ದಿವ್ಯ ಔಷಧಗಳು ಎಂದರು. ನಂತರ ಪ್ರಾಣಾಯಾಮದ ಪ್ರಾತ್ಯಕ್ಷಿಕೆ ನೀಡಿ ಬಸ್ತ್ರಿಕಾ, ಕಫಾಲಭಾತಿ, ಅನುಲೋಮ-ವಿಲೋಮ ಮುಂತಾದುವುಗಳು ಅನೇಕ ರೋಗ ತಡೆಗೆ ಕಾರಣವಾಗಿ ಸ್ವಸ್ಥ ಜೀವನಕ್ಕೆ ರಹದಾರಿ ಎಂದರು.
ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್ ಕುಮಾರ್ ಎಚ್. ಎನ್. ಮಾತನಾಡಿ ಯೋಗದಿಂದ ಆಯಸ್ಸು ವರ್ಧನೆ ಮತ್ತು ನಿರೋಗಿ ಬಾಳ್ವೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ ನಿಲಯದ ಮುಖ್ಯಸ್ಥರಾದ ಜಿ. ಗುರುಮೂರ್ತಿ ಮಾತನಾಡಿ ಯೋಗ ಅಭ್ಯಾಸದಿಂದ ಸದ್ಚಿಂತನೆಯೊಂದಿಗೆ ಉತ್ತಮ ಮನಸ್ಸು ಬೆಳೆಸಲು ಅನುಕೂಲ ಎಂದರು.
ಕಾರ್ಯಕ್ರಮದಲ್ಲಿ ಪ್ರಸಾರ ನಿರ್ವಾಹಕ ಸಂಗಮೇಶ್, ಆಡಳಿತಾಧಿಕಾರಿ ಸಯ್ಯದ್ ಖತೀಬ್ ಅಸ್ತ್ರಾರ್, ಲೆಕ್ಕಾಧಿಕಾರಿ ವಿಜಯ ಕುಮಾರ್ ಜೆ, ಸುರೇಶ್ ರಾಂಪುರೆ, ತಾಂತ್ರಿಕ ವಿಭಾಗದ ಅಶೋಕ್ ಸೋಂಕಾವಡೆ, ಅನುಷಾ ಡಿ. ಕೆ, ಬಾಳಪ್ಪ, ಶೇಷಗಿರಿ ಶಿವಪುತ್ರಪ್ಪ ಸಿದ್ದರಾಮ ಕಂಬಾರ, ಸುನೀಲ್ ಕುಮಾರ್ ಬರ್ಮಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.