ಕಲಬುರಗಿ: ಶ್ರೀನಿವಾಸ ಆಚಾರ್ಯ ನಿಧನ
ಕಲಬುರಗಿ: ಕಲಬುರಗಿ ದಕ್ಷಿಣ ಕನ್ನಡ ಸಂಘದ ಹಿರಿಯ ಸದಸ್ಯರು, ಉದ್ಯಮಿ ಮತ್ತು ಸಮಾಜ ಸೇವಕರಾದ ಶ್ರೀನಿವಾಸ ಆಚಾರ್ಯ ಇಂದು(ಮೇ 14)ಹೃದಯಾಘಾತದಿಂದ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ,ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೇ 15ರಂದು ಭಾನುವಾರ ಬೆಳಗ್ಗೆ ಉಡುಪಿಯ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಲಬುರಗಿಯ ಪಾದೂರು ರಾಮಕೃಷ್ಣ ತಂತ್ರಿ - ಸರಸ್ವತಿ ತಂತ್ರಿಯವರ ಜೊತೆಗೆ ಸುಮಾರು 42 ವರ್ಷಗಳ ಕಾಲ ಉದ್ಯಮ ಹಾಗೂ ಕಲಬುರಗಿ ರಾಮ ಮಂದಿರದ ಧಾರ್ಮಿಕ ಕಾರ್ಯಗಳನ್ನು ಮಾಡಿ ಜನಪ್ರಿಯರಾಗಿದ್ದರು . ಕಲಬುರಗಿ ಕೃಷ್ಣ ಮಂದಿರದ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಸಾಮಾಜಿಕ ಧಾರ್ಮಿಕ ನೇತೃತ್ವ ನೀಡಿದ್ದರು. ದಕ್ಷಿಣ ಕನ್ನಡ ಸಂಘದ ಹಿರಿಯ ಸದಸ್ಯರಾಗಿ ಸಂಘದ ಶ್ರೇಯೋಭಿವೃದ್ಧಿಗೆ ಮತ್ತು ಈ ಭಾಗದ ಜನರಿಗಾಗಿ ದುಡಿದಿದ್ದರು. ಸಂಘದ ಅನ್ನ ಬ್ರಹ್ಮ ಯೋಜನೆಯ ಸಂಚಾಲಕರಾಗಿ ಕರೋನ ಸಂದರ್ಭದಲ್ಲಿ ಕಾರ್ಮಿಕರಿಗೆ ಬಡ ಬಗ್ಗರಿಗೆ ಅಕ್ಕಿ ಧಾನ್ಯ ಸಾಮಗ್ರಿ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದರು. ಮೋಹನ್ ಲಾಡ್ಜ್ ನಲ್ಲಿ ಕರಾವಳಿಗರಿಗೆ ಹಾಗೂ ಪ್ರವಾಸಿಗರಿಗೆ ಅತಿಥ್ಯ ನೀಡಿ ನೆರವಾಗುವ ಆತಿಥ್ಯ ಮನೋಭಾವದಿಂದ ಜನಾಂನುರಾಗಿಯಾಗಿದ್ದರು. ಕಲಬುರಗಿಯಲ್ಲಿ ದ. ಕ. ಸಂಘದ ಗಣೇಶೋತ್ಸವಕ್ಕೆ ಸಾಂಸ್ಕೃತಿಕ ಮೆರುಗು ಕಲ್ಪಿಸಿದ್ದರು. ಸಾಹಿತಿಗಳು , ಕಲಾವಿದರು ಮತ್ತು ವಿದ್ವಾಂಸರ ನಡುವೆ ಕೊಂಡಿಯಾಗಿ ರಾಮ ಮಂದಿರದಲ್ಲಿ ಅನೇಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.ಹೋಟೆಲ್ ಉದ್ಯಮಿಯಾಗಿ ಹೆಸರುವಾಸಿಯಾಗಿದ್ದವರು .