ಪಠ್ಯಕ್ರಮ ಬದಲಾಯಿಸಿ ನಮ್ಮದೇ ನಡೆಯಬೇಕೆಂಬುದು ಬ್ರಾಹ್ಮಣ್ಯದ ಕೆಟ್ಟತನ: ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ
''ಶಿಕ್ಷಣ ಸಚಿವರೇ ನೀವು ಸಂವಿಧಾನಾತ್ಮಕ ವ್ಯವಸ್ಥೆಯ ಪ್ರತಿನಿಧಿಯೇ ಹೊರತು ಆರೆಸ್ಸೆಸ್ ವಕ್ತಾರರಲ್ಲ''
ಮೈಸೂರು,ಮೇ:17: ಶಾಲೆಯ ಪಠ್ಯ ಕ್ರಮದಲ್ಲಿ ಲೋಕದ ತೀವ್ರ ಅನುಭವಗಳನ್ನು ಅನಾವರಣಗೊಳಿಸುವಂತಹ ಮತ್ತು ಸ್ವಾತಂತ್ರ್ಯದ ಹೋರಾಟ ಹಾಗೂ ಹೋರಾಟಗಾರರ ಮಹತ್ವವನ್ನು ತಿಳಿಸುವಂತಹ ಪಠ್ಯಗಳನ್ನು ಕೈಬಿಟ್ಟು, ದುರುದ್ದೇಶ ಮತ್ತು ಅಪ್ಪಟ್ಟ ಜಾತಿ ಪ್ರೇಮದ ಕಾರಣಕ್ಕೆ ಕೇವಲ ಒಂದು ನಿರ್ದಿಷ್ಟ ಜಾತಿಗೆ ಸೇರಿದ ಬರಹಗಾರರ ಪಠ್ಯಗಳನ್ನು ಅಳವಡಿಸಲು ಹೊರಟಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಬ್ರಿಟಿಷರ ನೇಣುಗಂಬವನ್ನೇ ಅಣಕಿಸಿದಂತಹ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್, ಇಡೀ ಜಗತ್ತಿಗೇ ಜ್ಞಾನದ ಬೆಳಕಾಗಬಲ್ಲ ಬಸವಣ್ಣನವರ ವಚನಗಳು ಹಾಗೂ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಭಾಷೆ ಮತ್ತು ದಟ್ಟವಾದ ಅನುಭವದ ಸ್ಪರ್ಶ ನೀಡಿದ ಲಂಕೇಶರ ಬರಹಗಳು ಮತ್ತು ವೈಚಾರಿಕತೆಗೆ ಹೆಸರಾಗಿದ್ದ ಎ ಎನ್ ಮೂರ್ತಿರಾಯರ ಬರಹಗಳಿಗೆ ಕತ್ತರಿ ಹಾಕಿರುವುದು, ಸರ್ಕಾರದ ಅಜ್ಞಾನ ಮತ್ತು ಅಯೋಗ್ಯತನದ ಸಂಕೇತವಾಗಿದೆ' ಎಂದಿದ್ದಾರೆ.
'ಇಂತಹ ಸಂಗತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಶಿಕ್ಷಣ ಸಚಿವರೇ ಈ ನಾನ್ ಸೆನ್ಸ್ ಗಳನ್ನು ಅನುಮೋದಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇವರು ಆರೆಸ್ಸೆಸ್ ನ ಅಣತಿಯಂತೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ' ಎಂದು ತಿಳಿಸಿದ್ದಾರೆ.
'ಶಿಕ್ಷಣ ಸಚಿವ ನಾಗೇಶ್ ಅವರೇ, ನೀವು ಸಂವಿಧಾನಾತ್ಮಕ ವ್ಯವಸ್ಥೆಯ ಪ್ರತಿನಿಧಿಯೇ ಹೊರತು ಆರೆಸ್ಸೆಸ್ ಎಂಬ ದೇಶದ್ರೋಹಿ ಸಂಘಟನೆಯ ವಕ್ತಾರರಲ್ಲ ಎಂಬುದನ್ನು ನೆನಪಿಡಿ. ಇನ್ನು ತಲೆಯಲ್ಲಿ ಮೂರು ಕಾಸಿನ ಜ್ಞಾನ ಇಲ್ಲದ ಮತ್ತು ದೇಶದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಹೋರಾಟದ ಕುರಿತಂತೆ ಯಾವುದೇ ತಿಳುವಳಿಕೆಯಿಲ್ಲದ ಹಾಗೂ ವಚನ ಚಳುವಳಿಯ ಮಹತ್ವ ಗೊತ್ತಿಲ್ಲದ ಕೆಲವು ತಲೆ ಹರಟೆಗಳನ್ನು ಪಠ್ಯ ಸಮಿತಿಗೆ ಆಯ್ಕೆ ಮಾಡಿರುವ ಸರ್ಕಾರವು ಕೂಡಲೇ ಅಂತ ಪೂರ್ವಾಗ್ರಹ ಪೀಡಿತರನ್ನು ಪಠ್ಯ ಸಮಿತಿಯಿಂದ ತೆಗೆದುಹಾಕಿ, ಶಿಕ್ಷಣ ತಜ್ಞರು ಮತ್ತು ಇತಿಹಾಸಕಾರರನ್ನು ನೇಮಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.
'ಮಕ್ಕಳಿಗೆ ಪ್ರೇರಣೆ ದೊರೆಯಲು ಭಗತ್ ಸಿಂಗ್ ಮತ್ತು ಬಸವಣ್ಣನಂತಹ ಮಹಾನ್ ವ್ಯಕ್ತಿಗಳ ಸಾಧನೆ ಮತ್ತು ತತ್ವಗಳು ಅಗತ್ಯವಲ್ಲವೇ?
ಇನ್ನು ಬಾಬಾ ಸಾಹೇಬರು ಹೇಳಿದಂತೆ " ನಾನು ಸಮಾಜದ ಹಿತಕ್ಕೆ ವಿರುದ್ಧವಾಗಿರುವ ಬ್ರಾಹ್ಮಣ್ಯದ ಕಡು ವಿರೋಧಿಯೇ ವಿನಃ ಬ್ರಾಹ್ಮಣರ ವಿರೋಧಿಯಲ್ಲ" ಎಂಬ ಮಾತನ್ನು ಮತ್ತೊಮ್ಮೆ ಅನುಮೋದಿಸುತ್ತೇನೆ ಜೊತೆಗೆ ಬ್ರಾಹ್ಮಣ್ಯದ ಚೇಷ್ಠೆ ಮತ್ತು ಅಜ್ಞಾನದ ಅಹಂಕಾರಗಳನ್ನು ಪ್ರದರ್ಶಿಸುತ್ತಿರುವ ಬ್ರಾಹ್ಮಣ್ಯವನ್ನು ತೀವ್ರವಾಗಿ ವಿರೋಧಿಸುತ್ತೇನೆ' ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.