ನಾಳೆ ಗೋಡ್ಸೆಯನ್ನೂ ಪಠ್ಯದಲ್ಲಿ ಸೇರಿಸಬೇಕು ಎಂದರೆ ಏನು ಮಾಡಬೇಕು: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮೇ 23: ‘ಪಠ್ಯಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು. ಬದಲಿಗೆ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯತೀತ ರಾಷ್ಟ್ರ. ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಸೋಮವಾರ ಜಯನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹೆತ್ತವರಿಗೆ ಹೆಗ್ಗಣ ಮುದ್ದು ರೀತಿ ಶಿಕ್ಷಣ ಸಚಿವ ನಾಗೇಶ್ ಅವರಿಗೆ ‘ಹೆಡ್ಗೆವಾರ್ ವಿಷಯ ಪಠ್ಯಕ್ಕೆ ಸೇರಿದರೆ ಯಾವ ಸಮಸ್ಯೆ ಇಲ್ಲ'. ನಾಗೇಶ್ ಆರೆಸ್ಸೆಸ್ ನವರು, ಹೆಡ್ಗೆವಾರ್ ಆರೆಸ್ಸೆಸ್ಸ್ ಸಂಸ್ಥಾಪಕರು. ನಾಳೆ ಗೋಡ್ಸೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂದರೆ? ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರು, ದೇಶಪ್ರೇಮ ಇರುವವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿದರೆ ನಾವು ಬೇಡ ಎಂದು ಹೇಳುವುದಿಲ್ಲ' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
‘ಕುವೆಂಪು ಅವರ ಬಗ್ಗೆ, ನಾಡಗೀತೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಬಾರದು. ಅವರು ರಾಷ್ಟ್ರಕವಿ. ಪಠ್ಯ ಪರಿಷ್ಕರಣೆ ಮಾಡಲು ವಿಷಯ ತಜ್ಞರ ಸಮಿತಿ ಮಾಡಬೇಕು, ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಯಾರ ಪಠ್ಯ ಇರಬೇಕು, ಇರಬಾರದು ಅವರು ನಿರ್ಧಾರ ಮಾಡಲಿ. ರೋಹಿತ್ ಚಕ್ರತೀರ್ಥ ಆರೆಸ್ಸೆಸ್ಸ್ ನವರು, ಅವರ ಬದಲು ಯಾವುದೇ ಪಕ್ಷ, ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರಾಗಿ ಮಾಡಿ' ಎಂದು ಸಿದ್ದರಾಮಯ್ಯ, ಸರಕಾರವನ್ನು ಆಗ್ರಹಿಸಿದರು.
‘ಭಗತ್ ಸಿಂಗ್, ಮಹಾತ್ಮ ಗಾಂಧಿ, ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದತೆಯ ಮೌಲ್ಯಗಳು ಉದ್ದೀಪನವಾಗುತ್ತದೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು, ಇಂಥವರ ಬಗ್ಗೆ ಮಕ್ಕಳಿಗೆ ಹೇಳಿ. ಮಕ್ಕಳ ಜ್ಞಾನ ವಿಕಾಸವಾಗಬೇಕೋ? ಸಂಕುಚಿತವಾಗಬೇಕೋ? ವೈಚಾರಿಕತೆ ಬೆಳೆಸಿಕೊಳ್ಳಬೇಕೋ? ಬೇಡವೋ?' ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು.
ಹೆಚ್ಚು ಮಾಡಿ ಇಳಿಸಿದ್ದಷ್ಟೇ: ‘ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ನಾನು ತಕರಾರು ಮಾಡುತ್ತಿಲ್ಲ, ಆದರೆ ಈ ವರ್ಷದ ಮಾರ್ಚ್ನಿಂದ ಈವರೆಗೆ ಬೆಲೆ ಎಷ್ಟು ಹೆಚ್ಚಾಗಿದೆ? ಐದು ರಾಜ್ಯಗಳ ಚುನಾವಣೆ ಆದಮೇಲೆ ಬರೀ ಎರಡೇ ತಿಂಗಳಲ್ಲಿ 11 ರೂ.ಗಿಂತ ಬೆಲೆ ಹೆಚ್ಚು ಮಾಡಿದ್ದಾರೆ. ಈಗ ಇಳಿಸಿದ್ದು ಎಷ್ಟು? ಇದು ಹೆಚ್ಚು ಮಾಡಿ, ಇಳಿಸಿದ್ದು ಅಷ್ಟೇ' ಎಂದು ಸಿದ್ದರಾಮಯ್ಯ ಟೀಕಿಸಿದರು.
‘2014ರಲ್ಲಿ ಮೋದಿ ಪ್ರಧಾನಿಯಾಗುವ ಮೊದಲು ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ ಎಷ್ಟಿತ್ತು ಎಂದು ಗೊತ್ತಾ? ಡೀಸೆಲ್ ಮೇಲೆ 3.46 ರೂ., ಪೆಟ್ರೋಲ್ ಮೇಲೆ 9.20ರೂ. ಇತ್ತು. ಈಗೆಷ್ಟಿದೆ? 30 ರೂ.ಸಮೀಪ ಇದೆ. ಇದನ್ನು ಹೆಚ್ಚು ಮಾಡಿದ್ದು ಯಾರು? ಮನಮೋಹನ್ ಸಿಂಗ್ ಅಥವಾ ಮೋದಿಯವರಾ? ಬೆಲೆ ಸ್ಪಲ್ವ ಇಳಿಸಿ ಏಕೆ ಬೆನ್ನು ತಟ್ಟಿಕೊಳ್ತೀರಾ? ನಿಮಗೆ ಬೆಲೆ ಇಳಿಸಬೇಕು ಎಂದು ಮನಸಿದ್ದರೆ ಮೋದಿ ಪ್ರಧಾನಿಯಾದಾಗ ಅಬಕಾರಿ ಸುಂಕ ಎಷ್ಟಿತ್ತೋ ಅದಕ್ಕೆ ಸಮನಾಗಿ ಈಗಲೂ ಹಾಕಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
‘ಮೋದಿ ಅವರು ಪ್ರಧಾನಿಯಾದಾಗ ಅನಿಲ ಬೆಲೆ 414 ರೂ.ಇತ್ತು, ಈಗ 1,050 ರೂ.ಆಗಿದೆ, ಇದನ್ನು ಜಾಸ್ತಿ ಮಾಡಿದ್ದು ಮನಮೋಹನ್ ಸಿಂಗ್ ಅವರ? ಮೋದಿ ಅವರ? ಆಗ ಪೆಟ್ರೋಲ್ ಬೆಲೆ 68 ರೂ., ಡೀಸೆಲ್ ಬೆಲೆ 46 ರೂ.ಇತ್ತು, ಇವತ್ತು ನೂರು ರೂಪಾಯಿ ಆಗಿದೆ. ಹಾಗಾದರೆ ಬೆಲೆ ಎಲ್ಲಿ ಕಡಿಮೆ ಆಗಿದೆ ಹೇಳಿ? ಬೆಲೆ ಹೆಚ್ಚು ಮಾಡೋದೇ ಸರ್ವಸ್ಪರ್ಶಿನ? ಸರ್ವ ಸ್ಪರ್ಶ ಎಂದರೆ ಎಲ್ಲ ಜನರಿಗೆ ಒಳ್ಳೆಯದು ಮಾಡೋದು, ಸರ್ವಜನೋ ಸುಖಿನೋ ಭವಂತು ಅಂತ ಅಲ್ಲವ? ನಾನು ಅಕ್ಕಿ ಕೊಟ್ಟಿದ್ದು ಸರ್ವಸ್ಪರ್ಶಿ ಅಲ್ಲವ ಹಾಗಾದ್ರೆ?' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಎರಡು ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತಿದ್ದೀವಿ, ಈಗ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡ್ತಿದ್ದಾರೆಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಇದನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ, ಬಹಿರಂಗವಾಗಿ ಚರ್ಚೆ ಮಾಡುವ ವಿಷಯ ಅಲ್ಲ' ಎಂದರು.
‘ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಯಾವೆಲ್ಲ ಜಾತಿಗಳ ಪರಿಸ್ಥಿತಿ ಹೇಗಿದೆ ಮತ್ತು ಯಾರಿಗೆ ಅವಕಾಶ ನೀಡಬೇಕು, ಚುನಾವಣೆ ದೃಷ್ಟಿಯಿಂದ ಯಾರಿಗೆ ಅವಕಾಶ ನೀಡಬೇಕು, ಎರಡೇ ಸ್ಥಾನಗಳು ಇರುವುದರಿಂದ ಯಾರಿಗೆ ಕೊಡಬೇಕು ಎಂಬುದನ್ನು ಯೋಚನೆ ಮಾಡಿ ಹೈಕಮಾಂಡ್ಗೆ ಹೇಳಿ ಬಂದಿದ್ದೀವಿ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಿ ಸಂಜೆ ಒಳಗೆ ಪಟ್ಟಿ ಬಿಡುಗಡೆ ಮಾಡುತ್ತದೆ'
-ಸಿದ್ದರಾಮಯ್ಯ ವಿಪಕ್ಷ ನಾಯಕ