ಕಲಬುರಗಿಯಲ್ಲಿ 2 ವರ್ಷದ ಮಗುವಿನ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಮೃತದೇಹವನ್ನು ಮರಳಿನಲ್ಲಿ ಹೂತಿಟ್ಟಿದ್ದ ಆರೋಪಿಗಳು
ಕಲಬುರಗಿ: ನಗರದ ಚುನ್ನಾ ಭಟ್ಟಿಯ ಫಿರ್ದೌಸ್ ಕಾಲನಿಯ ಎರಡು ವರ್ಷದ ಮಗು ಮುಝಮ್ಮಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಸೋಮವಾರ ವಿಶ್ವ ವಿದ್ಯಾಲಯದ ಪೊಲೀಸರು ಬಂಧಿಸಿದ್ದಾರೆ.
ಫಿರ್ದೌಸ್ ಕಾಲನಿಯ ನಿವಾಸಿ ನವಾಝ್ ಕೊಲೆ ಮಾಡಿರುವ ಪ್ರಮುಖ ಆರೋಪಿಯಾಗಿದ್ದು, ಈತನೊಂದಿಗೆ ಕೆಲಸ ಮಾಡುತ್ತಿದ್ದ ಸದ್ದಾಮ್, ಅನೀಸ್ ಸುಹೈಲ್, ಝಹಿರುದ್ದೀನ್ ಹಾಗೂ ಅಪ್ರಾಪ್ತ ಓರ್ವನನ್ನು ಎಸಿಪಿ ಇನಾಮ್ದಾರ್ ಅವರ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತನಿಖಾದಳದ ತನಿಖಾಧಿಕಾರಿ ಅರುಣ್ ಮುರಗನ್ ನೇತೃತ್ವದಲ್ಲಿ ಆರೋಪಿಗಳೆಲ್ಲರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಲೆಯಾದ ಮುಝಮ್ಮಿಲ್ ತಂದೆ ಪ್ರಕರರಣದ ಪ್ರಮುಖ ಆರೋಪಿಯ ಕಿರಾಣಿ ಅಂಗಡಿಯಲ್ಲಿ ಸಾಲದ ರೂಪದಲ್ಲಿ ಸಾಮಗ್ರಿ ಪಡೆದು ನಂತರ ಹಣ ಪಾವತಿ ಮಾಡುತ್ತಿದರು, ಈ ಕುರಿತು ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದ ಪರಿಣಾಮ ಸೇಡು ತೀರಿಸಿಕೊಳ್ಳಲು ನವಾಝ್ ಮತ್ತು ಆತನ ಸಹಚರರು ಡಿಸೆಂಬರ್ 7 (2021)ರಂದು ಎರಡು ವರ್ಷದ ಮಗುವಾಗಿರುವ ಮುಝಮ್ಮಿಲ್ ನನ್ನು ಅಪಹರಿಸಿ ರಾತ್ರಿಯಿಡೀ ಹಿಂಸೆ ನೀಡಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಮೃತದೇಹವನ್ನು ಮರಳಿನಲ್ಲಿ ಹೂತಿಟ್ಟಿದ್ದರು.
ಬಳಿಕ ತಲೆ ಮರಿಸಿಕೊಂಡ ಆರೋಪಿಗಳ ಶೋಧ ಕಾರ್ಯಚರಣೆ ನಡೆದಿತ್ತು. ಐದು ತಿಂಗಳಿಂದ ಮುಂಬೈಯಲ್ಲಿ ಇದ್ದಿದ್ದ ಆರೋಪಿಗಳು ಪ್ರಕರಣ ತಣ್ಣಗಾಗಿರುವುದನ್ನು ತಿಳಿದು ಕೆಲವು ದಿನಗಳ ಹಿಂದೆ ಮರಳಿ ಮನೆಗೆ ಬಂದಿದ್ದಾರೆ. ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಧರಣಿ ಸತ್ಯಗ್ರಹ ನಡೆಯುತ್ತಿರುವುದರಿಂದ ತನಿಖೆ ಚುರುಕುಗೊಳಿಸಲಾಗಿತ್ತು ಎಂದು ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.