ಶಿವಮೊಗ್ಗ | ಕಟ್ಟಡ ಪರವಾನಗಿ ನವೀಕರಣಕ್ಕೆ ಲಂಚ: ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ
ಶಿವಮೊಗ್ಗ (ಮೇ.30) : ಕಟ್ಟಡ ಪರವಾನಗಿ ನವೀಕರಣಕ್ಕೆ ಬಂದವರ ಬಳಿ ಲಂಚ ಪಡೆಯುತ್ತಿದ್ದ ಮಹಾನಗರ ಪಾಲಿಕೆ ಡಾಟಾ ಎಂಟ್ರಿ ಆಪರೇಟರ್ ಒಬ್ಬ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಮಹಾನಗರ ಪಾಲಿಕೆಯ ಕಟ್ಟಡ ಪರವಾನಗಿ ವಿಭಾಗದ ಡಾಟಾ ಎಂಟ್ರಿ ಆಪರೇಟರ್ ವಿಜಯ್ ಕುಮಾರ್, ಎಸಿಬಿ ಬಲೆಗೆ ಬಿದ್ದಿದ್ದಾನೆ.
ವಿನೋಬನಗರದ ನಿವಾಸಿಯೊಬ್ಬರು ತಮ್ಮ ಪರಿಚಯಸ್ಥರ ಕಟ್ಟಡದ ಪರವಾನಗಿ ಪಡೆದಿದ್ದರು. 2022ನೇ ಫೆಬ್ರವರಿ ಸಾಲಿನಲ್ಲಿ ಪರವಾನಗಿ ಅಂತ್ಯವಾಗಿತ್ತು. ಇದರ ನವೀಕರಣಕ್ಕೆ ಬಂದಿದ್ದು, ಪಾಲಿಕೆಯಲ್ಲಿ ಅಗತ್ಯ ಶುಲ್ಕ ಪಾವತಿಸಿದ್ದರು.
ರಶೀದಿಯನ್ನು ಡಾಟಾ ಎಂಟ್ರಿ ಆಪರೇಟರ್ ವಿಜಯ್ ಕುಮಾರ್’ಗೆ ತಂದು ಕೊಟ್ಟು ಉಳಿದ ಕೆಲಸ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ವಿಜಯ್ ಕುಮಾರ್ 6 ಸಾವಿರ ರೂ. ಲಂಚದ ಹಣಕ್ಕೆ ಡಿಮಾಂಡ್ ಮಾಡಿದ್ದಾನೆ.
ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಎಸಿಬಿಗೆ ದೂರು ನೀಡಲಾಗಿತ್ತು. ಇವತ್ತು ಲಂಚದ ಹಣ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ವಿಜಯ್ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.