ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ರೆ ರಾಜೀನಾಮೆ ಕೊಡ್ತೇನೆ: ಸಚಿವ ಮುರುಗೇಶ್ ನಿರಾಣಿ
ಬೆಳಗಾವಿ, ಜೂ.01: 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರು ಹೇಳಿದಂತೆ ನಾನು ಪಾಲಿಸ್ತೇನೆ. ಕುಟುಂಬ ರಾಜಕಾರಣ ಮಾಡುವುದಿಲ್ಲ, ನನ್ನ ಮಾತು ಕೇಳದೆ ಮೂರನೇ ವ್ಯಕ್ತಿ ರಾಜಕಾರಣಕ್ಕೆ ಬಂದಲ್ಲಿ ನಾನು ರಾಜೀನಾಮೆ ನೀಡುತ್ತೇನೆ' ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ನಗರದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿರಾಣಿ ಕುಟುಂಬದಿಂದ ಈಗಾಗಲೇ ಇಬ್ಬರು ರಾಜಕಾರಣದಲ್ಲಿದ್ದು, ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ನೂರಕ್ಕೆ ನೂರು ರಾಜಕೀಯಕ್ಕೆ ಬರುವುದಿಲ್ಲ. ಸ್ಪರ್ಧಿಸಿದರೆ ಅವತ್ತೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
ನಿರಾಣಿ ಕುಟುಂಬದ ಮೂರನೇ ವ್ಯಕ್ತಿಯ ಸ್ಪರ್ಧೆ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದ ಅವರು, ನಾನು ಮತ್ತು ನನ್ನ ಸಹೋದರ ಒಂದೇ ಒಂದು ಸಲ ಜಮಖಂಡಿ, ರಾಮದುರ್ಗದಲ್ಲಿ ಕಾಲಿಟ್ಟಿಲ್ಲ. ಅಲ್ಲಿ ಸಭೆ ಸಮಾರಂಭವೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Next Story