ಪಠ್ಯ ಪುಸ್ತಕ ಪರಿಷ್ಕರಣೆ; ಯಡಿಯೂರಪ್ಪ ಮೌನ ಮುರಿದು ಸರಕಾರಕ್ಕೆ ಸಲಹೆ ನೀಡಲಿ: ಪ್ರಿಯಾಂಕ್ ಖರ್ಗೆ ಆಗ್ರಹ
ಬೆಂಗಳೂರು, ಜೂ. 6: ‘ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಬಸವಣ್ಣನವರಿಗೆ ಅವಮಾನ ಆರೋಪದ ಹಿನ್ನೆಲೆಯಲ್ಲಿ ಮಠಾಧೀಶರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೌನ ವಹಿಸಿದ್ದು, ಅವರು ಮೌನ ಮುರಿದು ರಾಜ್ಯ ಸರಕಾರಕ್ಕೆ ಸರಿಯಾದ ಸಲಹೆ ನೀಡಬೇಕು' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಸಮಿತಿ ಸದಸ್ಯರ ಪ್ರಬುದ್ದತೆ ಬಗ್ಗೆ ಸಂಶಯವಿದೆ. ಒಂದೇ ಸಮುದಾಯಕ್ಕೆ ಸೇರಿದವರು ಸಮಿತಿಯಲ್ಲಿದ್ದಾರೆ. ಪ್ರತಿಯೊಂದು ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಆದರೆ, ಸರಕಾರ ಪುಸ್ತಕ ಮುದ್ರಣ ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದು, ತಿಪ್ಪುಪಡಿ ಮಾಡಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು.
‘ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನ ಮಾಡಿದರೂ ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್ ಮೌನವಾಗಿದ್ದಾರೆ. ತಮ್ಮ ಮೌನ ಒಪ್ಪಿಗೆ ಎಂಬ ಸಂದೇಶ ಹೋಗುತ್ತದೆ. ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ವಾಲ್ಮೀಕಿ ಸ್ವಾಮೀಜಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್ಟಿ ಸಮುದಾಯವನ್ನು ಅನಾಗರಿಕರು ಎಂದು ಪಠ್ಯದಲ್ಲಿ ಅವಮಾನ ಮಾಡಿದ್ದಾರೆ. ಹಾಗಿದ್ದರೂ ಸಚಿವ ಶ್ರೀರಾಮುಲು ಎಲ್ಲಿದ್ದಾರೆ ಗೊತ್ತಿಲ್ಲ. ಇವರಿಗೆ ರಾಮ ಬೇಕು, ವಾಲ್ಮೀಕಿ ಬೇಡವೇ? ಆ ಸಮುದಾಯ ಬೇಡವೇ?' ಎಂದು ಅವರು ಟೀಕಿಸಿದರು.
‘ಸಂವಿಧಾನ ಶಿಲ್ಪಿ' ಡಾ.ಬಿ.ಆರ್.ಅಂಬೇಡ್ಕರ್ ಕಂಡರೆ ಬಿಜೆಪಿಗೆ ಅಲರ್ಜಿ. ಇತಿಹಾಸದ ಪುಟಗಳಿಂದ ಅಂಬೇಡ್ಕರ್ ಅವರನ್ನು ಅಳಿಸಲು ಸಂಚು ನಡೆದಿದೆ. ಅವರ ಕುರಿತಾದ ಮಾಹಿತಿಗಳನ್ನು ಹಾಗೂ ಮಹಾಡ್ ಸತ್ಯಾಗ್ರಹದ ಬಗ್ಗೆ ಕೈಬಿಡಲಾಗಿದೆ. ಅಂಬೇಡ್ಕರ್ ಹಿಂದುತ್ವದ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸಿದ್ದ ನಿಲುವು ತೆಗೆದು ಹಾಕಲಾಗಿದೆ. ಸಂವಿಧಾನದ ಶಿಲ್ಪಿ ಎಂಬುದನ್ನು ಕೈಬಿಡಲಾಗಿದೆ. ಇದೀಗ ಶಾಸಕರಾದ ಪಿ.ರಾಜೀವ್, ಎನ್.ಮಹೇಶ್ ಏಕೆ ಮಾತನಾಡುತ್ತಿಲ್ಲ?' ಎಂದು ಪ್ರಿಯಾಂಕ್ ಆಕ್ರೋಶ ಹೊರಹಾಕಿದರು.
‘ಕೊಳ್ಳಗಾಲ ಶಾಸಕ ಮಹೇಶ್ ಅವರು ಹಿಂದೆ ಅಂಬೇಡ್ಕರ್ ಪುಸ್ತಕ ಹಿಡಿದುಕೊಂಡಿದ್ದರು. ಇತ್ತೀಚೆಗೆ ಸಾವರ್ಕರ್ ಪುಸಕ್ತ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಪಠ್ಯದಲ್ಲಿ ಭಗವಾನ್ ಬುದ್ಧರ ಬಗ್ಗೆ ಏಕವಚನ ಪ್ರಯೋಗ ಮಾಡಲಾಗಿದೆ. ಬೌದ್ಧಧರ್ಮ ಕೇವಲ ಒಂದು ಮತ ಎನ್ನಲಾಗಿದೆ. ತೀಥರ್ಂಕರರಾದ ಪಾಶ್ವನಾಥರ ಬಗ್ಗೆ ಏಕವಚನ ಪ್ರಯೋಗ ಆಗಿದೆ. ಶಂಕರಾಚಾರ್ಯ ಮಧ್ವಾಚಾರ್ಯರು ಬಹುವಚನ, ಬೌದ್ಧ ಧರ್ಮದ ಗುರುಗಳಿಗೆ ಏಕವಚನ ಪ್ರಯೋಗ ಏಕೆ? ಎಂದು ಅವರು ಉಲ್ಲೇಖಿಸಿದರು.
‘ಕರ್ನಾಟಕದ ಅಸ್ಮಿತೆಯ ಪ್ರಶ್ನೆ. ಇದು ಸರ್ವಜನಾಂಗದ ಶಾಂತಿಯ ತೋಟ. 6ನೆ ತರಗತಿಯಲ್ಲಿ ಕನ್ನಡ ರಾಜ್ಯೋತ್ಸವ ಕುರಿತು ಭುವನೇಶ್ವರಿ ಮೆರವಣಿಗೆ ಚಿತ್ರ ತೆಗೆದು, ಕೇಸರಿ ಧ್ವಜ ಕಾಣುವ ಮೆರವಣಿಗೆ ಚಿತ್ರ ಹಾಕಲಾಗಿದೆ. ಇವರು ತಾಯಿ ಭುವನೇಶ್ವರಿಗಿಂತ ದೊಡ್ಡವರ? ಇದು ಆರು ಕೋಟಿ ಕನ್ನಡಿಗರಿಗೆ ಮಾಡುವ ಅಪಮಾನವಲ್ಲವೆ?, 1ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಅವರು ಟೀಕಿಸಿದರು.
ಪ್ರವಾದಿ ಕುರಿತು ಅವಹೇಳನ: ಜಾಲತಾಣಗಳಲ್ಲಿ ಭಾರತವನ್ನು ನಿಷೇಧಿಸಿ, ಭಾರತದ ಉತ್ಪನ್ನಗಳನ್ನು ನಿಷೇಧಿಸಿ ಎಂಬ ಟ್ರೆಂಡಿಂಗ್ ನಡೆಯುತ್ತಿದೆ. ಕತಾರ್, ಕುವೈತ್, ಯುಎಇ, ಒಮಾನ್, ಇರಾನ್, ಲಿಬಿಯಾ, ಸೌದಿ ಅರೇಬಿಯಾ ಸಹಿತ ಇಸ್ಲಾಂ ದೇಶಗಳಲ್ಲಿ ಈ ಟ್ರೆಂಡಿಂಗ್ ಮಾಡಲಾಗಿದೆ. ನಾನು ಈ ಹಿಂದೆ ಹೇಳಿದಂತೆ ಈ ರಾಷ್ಟ್ರಗಳ ಜತೆಗಿನ ರಫ್ತು ಹಾಗೂ ಆರ್ಥಿಕ ವ್ಯವಹಾರ 2025ರ ವೇಳೆಗೆ 300 ಬಿಲಿಯನ್ ಡಾಲರ್ ನಷ್ಟು ತಲುಪಲಿದೆ ಎಂದು ಅಂದಾಜಿದೆ. ಇನ್ನು ಇದರಿಂದ ಭಾರತದ ಉತ್ಪನ್ನ ಕಂಪೆನಿಗಳಿಗೆ ಬಹಳ ನಷ್ಟ ಉಂಟಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಜಿಂದಾಲ್ ಎಂಬುವವರು ಪ್ರವಾದಿಯ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
‘2022-23ರಲ್ಲಿ ಕರ್ನಾಟಕ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಆಗಲಿದೆ ಎಂದು ಸರಕಾರ ತನ್ನ ಆರ್ಥಿಕ ವರದಿಯಲ್ಲಿ ತಿಳಿಸಿದೆ. ಆದರೆ, ಇದು ಸಾಧ್ಯವೇ? ನೀವು ಮಾವಿನಕಾಯಿ ಮಾರಾಟ ಮಾಡÀಲು ಅವಕಾಶ ನೀಡುತ್ತಿಲ್ಲ. ಒಂದು ಟ್ರಿಲಿಯನ್ ಆರ್ಥಿಕತೆ ಕನಸು ಕಾಣುತ್ತಿದ್ದೀರಿ. ಮಹಾರಾಷ್ಟ್ರ ಈಗಾಗಲೇ 2 ಟ್ರಿಲಿಯನ್ ಆರ್ಥಿಕತೆ ಬಗ್ಗೆ ಆಲೋಚಿಸುತ್ತಿದ್ದಾರೆ. ಅವರನ್ನಾದರೂ ನೋಡಿ ಆ ಬಗ್ಗೆ ಆಲೋಚಿಸಿ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಉತ್ತಮ ವಾತಾವರಣ ನಿರ್ಮಿಸಲು ಆಸ್ಥೆ ವಹಿಸಿ'
-ಪ್ರಿಯಾಂಕ್ ಖರ್ಗೆ ಮಾಜಿ ಸಚಿವ, ಹಾಲಿ ಶಾಸಕ
‘ಕಾನ್ಪುರದಲ್ಲಿ ಕೋಮು ಸಂಘರ್ಷ ಹೆಚ್ಚಿದ್ದು ಬಿಜೆಪಿ ಬುಲ್ಡೋಜರ್ ಸಂಸ್ಕೃತಿಯನ್ನು ಪರಿಚಯಿಸಿದ್ದು, ನಿಮಗೆ ತಾಕತ್ತಿದ್ದರೆ ಈ ಕೋಮು ಗಲಭೆಗೆ ಕಾರಣವಾಗಿರುವವರ ಮನೆ ಮೇಲೆ ಬುಲ್ಡೋಜರ್ ಕ್ರಮ ಜರುಗಿಸಿ. ಕೇವಲ ಉಚ್ಚಾಟಿಸಿದರೆ ಸಾಲದು ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ. ಅರುಣ ಸಿಂಗ್ ತಾವು ಈ ದೇಶದ ಸಂವಿಧಾನ ಒಪ್ಪಿಕೊಳ್ಳುತ್ತೇವೆ. ಕೋಮು ಸಾಮಸ್ಯಕ್ಕೆ ಸಹಕಾರ ನೀಡುತ್ತೇವೆ. ಯಾವುದೇ ಜಾತಿ-ಧರ್ಮದ ವಿಚಾರದಲ್ಲಿ ಬಿಜೆಪಿ ಪೂರ್ವಾಗ್ರಹ ಪೀಡಿತವಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಈಶ್ವರಪ್ಪ, ಸಿ.ಟಿ.ರವಿ, ಪ್ರತಾಪ್ ಸಿಂಹ, ರೇಣುಕಾಚಾರ್ಯ ಸೇರಿ ಅನೇಕರಿಗೆ ಅನುಮತಿ ನೀಡಿದ್ದೀರಿ. ನಿಮ್ಮ ಹೇಳಿಕೆಗೆ ಬದ್ಧವಾಗಿದ್ದರೆ ಬಾಯಿ ಹರುಕ ನಾಯಕರ ಬಾಯಿಗೆ ಬೀಗ ಹಾಕಿ. ಇಲ್ಲದಿದ್ದರೆ ಅವರನ್ನೂ ಪಕ್ಷದಿಂದ ಹೊರಹಾಕಿ'
-ರಮೇಶ್ ಬಾಬು ಕಾಂಗ್ರೆಸ್ ವಕ್ತಾರ