ರಾಯಚೂರು | ಕಲುಷಿತ ನೀರು ಸೇವನೆ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ರಾಯಚೂರು, ಜೂ.8: ನಗರದಲ್ಲಿ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿದ್ದರೆನ್ನಲಾದ ಮತ್ತೋರ್ವ ವ್ಯಕ್ತಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ನಗರದ 8ನೇ ವಾರ್ಡ್ನ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಕರೀಂ(50) ಮೃತಪಟ್ಟವರು.
ಅಬ್ದುಲ್ ಕರೀಂ ಕಲುಷಿತ ನೀರು ಸೇವಿಸಿದ್ದರಿಂದ ವಾಂತಿ, ಭೇದಿಯಿಂದ ಬಳಲುತ್ತಿದ್ದರು. ಮೂರು ದಿನಗಳ ಹಿಂದೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕಲುಷಿತ ನೀರು ಸೇವನೆ ಮೂತ್ರಕೋಶದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ. ಮೃತರು ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.
ವಾರದ ಹಿಂದೆ ಕಲುಷಿತ ನೀರು ಸೇವಿಸಿದ್ದರಿಂದ ನಗರದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಈ ಪೈಕಿ ಮಲ್ಲಮ್ಮ (40), ಅಬ್ದುಲ್ ಗಫೂರ್ (37), ಅರಬ್ ಮೊಹಲ್ಲಾ ಮುಹಮ್ಮದ್ ನೂರ್ (43) ಎಂಬವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇದೀಗ ಅಬ್ದುಲ್ ಕರೀಂ ಸಾವನ್ನಪ್ಪುವುದರೊಂದಿಗೆ ಮೃತರ ಸಂಖ್ಯೆ 4ಕ್ಕೆ ಏರಿದೆ.