ನಾನು ಮುಸ್ಲಿಮರ ಬೀದಿಗೆ ಹೋಗಿ ಓಟು ಕೇಳಿಲ್ಲ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: 'ನಾವು ಮುಸ್ಲಿಮರ ಓಟು ಅವಲಂಬಿಸಿಲ್ಲ, ಅವರ ಬೀದಿಗೆ ಹೋಗಿ ನಾನು ಓಟು ಕೇಳಿಲ್ಲ' ಎಂದು ಮಾಜಿ ಸಚಿವ,ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡುವುದು ಸಿದ್ದರಾಮಯ್ಯ ಚಾಳಿ, ಈಗ ಕುಮಾರಸ್ವಾಮಿಗೆ ಹೋಗ್ತಾ ಇದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಮುಸ್ಲಿಮ್ ಓಲೈಕೆಗೆ ಆರೆಸ್ಸೆಸ್ ಬೈಯ್ತಾರೆ. ಅವರ ಓಟು ಬಂದು ಬಿಡುತ್ತೆ ಎಂಬ ಚಿಂತನೆಯಲ್ಲಿದ್ದಾರೆ. ಓಟುಗಳನ್ನ ನೀವೇ ತಗೊಳ್ಳಿ. ಬಿಜೆಪಿ ಬಹಳ ಕಡೆ ಮುಸ್ಲಿಮ್ ಓಟಿನ ಮೇಲೆ ಅವಲಂಬಿಸಿಲ್ಲ. ಶಿವಮೊಗ್ಗದಲ್ಲಂತೂ ಆಗಿಲ್ಲ, ನಾನು ಅವರ ಬೀದಿಗೆ ಹೋಗಿ ಓಟೂ ಕೇಳಿಲ್ಲ. ಜನ ಓಟು ಕೊಡ್ತಾ ಇದ್ದಾರೆ, ಅಭಿವೃದ್ಧಿ ಕೆಲಸ ಆಗ್ತಾ ಇದೆ ಎಂದರು.
ಕುಮಾರಸ್ವಾಮಿ ಮುಂದಿನ ಸಿಎಂ ಭರವಸೆ ವಿಚಾರ: ಯಾವ ಕಾರಣಕ್ಕೂ ಬೇರೆ ಪಕ್ಷದವರು ಸಿಎಂ ಆಗಲ್ಲ. ಬಿಜೆಪಿ ಪಕ್ಷದದವರೇ ಸಿಎಂ ಆಗ್ತಾರೆ. ಆಯಾ ಪಕ್ಷದ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ಅವರಿಗೆ ಬಿಟ್ಟಿದ್ದು. ಬಿಜೆಪಿ ಚೆನ್ನಾಗಿದೆ ಎಂದು ಬರ್ತಾರೆ. ಬಂದವರಿಗೆ ಬರಬೇಡಿ ಎಂದು ಹೇಳಲಾಗುತ್ತಾ..? ರಾಜ್ಯದಲ್ಲಿ ಬಿಜೆಪಿ ಜೊತೆ ಬಂದವರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ.
ಮನೆ ಮಗನನ್ನ ಚೆನ್ನಾಗಿ ಇಟ್ಟುಕೊಳ್ಳಿ:
ಶಾಸಕರನ್ನ ನೀವು ವಿಶ್ವಾಸದಿಂದ ಇಟ್ಟುಕೊಳ್ಳಿ. ಅವರೇಕೆ ಬೇರೆ ಪಕ್ಷದ ಜೊತೆ ಹೋಗಬೇಕು.? ಮಹಾರಾಷ್ಟ್ರದ ಸಿಎಂ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶಾಸಕರು ಬೇಸರಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ನೋಡಿ ಮೆಚ್ಚಿದ್ದಾರೆ. ಬಿಜೆಪಿಯವರು ಯಾಕೆ ಬೇಡ ಅಂತಾರೆ ಎಂದರು.