ಕೊಡಗಿನ ಹಲವೆಡೆ ಮತ್ತೆ ಕಂಪಿಸಿದ ಭೂಮಿ: ಭಯಭೀತರಾದ ಜನತೆ
ಸಾಂದರ್ಭಿಕ ಚಿತ್ರ (source: PTI)
ಕೊಡಗು, ಜೂ.28: ಕೊಡಗು ಜಿಲ್ಲೆಯ ಹಲವೆಡೆ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ.
ಇಂದು ಬೆಳಗ್ಗೆ 7.:45ರ ಸಮಯದಲ್ಲಿ ಲಘುವಾಗಿ ಭೂಮಿ ಕಂಪಿಸಿದೆ. ಮಡಿಕೇರಿ, ನಾಪೋಕ್ಲು ಕುಕ್ಕುಂದ ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ, ಮದೆನಾಡು ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಮೂರನೇ ಬಾರಿ ಈ ರೀತಿ ಲಘು ಭೂಕಂಪನದ ಅನುಭವ ಆಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಸುಳ್ಯದಲ್ಲೂ ಕಂಪಿಸಿದ ಭೂಮಿ
ದ.ಕ. ಜಿಲ್ಲೆಯ ಸುಳ್ಯ ತಾಲೂಕಿನಲ್ಲೂ ಮಂಗಳವಾರ ಬೆಳಗ್ಗೆ 7:44, 7:45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ಅನುಭವ ಹಂಚಿಕೊಂಡಿದ್ದಾರೆ.
ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್ಗಳು ಕಂಪಿಸಿವೆ. ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಜನರು ತಿಳಿಸಿದ್ದಾರೆ.
ರವಿವಾರ ಕರಿಕೆ ಸಮೀಪ ರಿಕ್ಟರ್ ಸ್ಕೇಲ್ನಲ್ಲಿ 2.3 ತೀವ್ರತೆಯ ಕಂಪನ ಆಗಿ ಅದರ ಪ್ರತಿಫಲನ ಈ ಭಾಗದಲ್ಲಿ ಉಂಟಾಗಿತ್ತು.