''ಡಿಸಿಪಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ'': ಚಾಲಕನ ಅಳಲು
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.28: ನಿಗದಿತ ಸಮಯಕ್ಕಿಂತ ಅಧಿಕ ಕಾಲ ಕರ್ತವ್ಯ ನಿರ್ವಹಿಸಿದರೂ, ರಜೆ ನೀಡದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿಸಿಪಿ ವಿರುದ್ಧ ಪೊಲೀಸ್ ಇಲಾಖೆಯ ಚಾಲಕರೊಬ್ಬರು ಪತ್ರ ಬರೆದಿದ್ದಾರೆ.
ಕಳೆದ 5 ತಿಂಗಳಿಂದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಚಾಲಕನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಆದರೆ, ಕಳೆದ ಮೂರು ವರ್ಷಗಳಿಂದ ವಿಧಾನಸೌಧದ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯೋರ್ವರು ಚಾಲಕರ ಕೆಲಸ ಆರು ಗಂಟೆಯಾದರೂ 12ರಿಂದ 14 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ರಜೆ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಮುಖ್ಯವಾಗಿ ಆರೋಗ್ಯ ಸಮಸ್ಯೆಯಿದ್ದರೂ ರಜೆ ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಕಿರಿಕಿರಿ ಮಾಡಲಾಗುತ್ತಿದೆ. ರಜೆ ವಿಚಾರದಲ್ಲಿ ಉತ್ತರಕರ್ನಾಟಕ ಹಾಗೂ ದಕ್ಷಿಣಕರ್ನಾಟಕ ಎಂದು ತಾರತಮ್ಯ ಎಸಗಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಮಕ್ಕಳನ್ನು ಶಾಲೆಗೆ ಬಿಡಲು ಒಂದು ವಾಹನ, ಕರ್ತವ್ಯಕ್ಕೆ ಮತ್ತೊಂದು ವಾಹನ ಬಳಸುವ ಮೂಲಕ ಸರಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಾಲನೆ ವೇಳೆ ಏನಾದರೂ ಅಪಘಾತ ಸಂಭವಿಸಿದರೆ ಅದಕ್ಕೆ ನೇರ ಹೊಣೆ ಅವರೇ ಆಗಿರುತ್ತಾರೆ ಎಂದು ಸದಯ ವೈರಲ್ ಆಗಿರುವ ನಾಲ್ಕು ಪುಟಗಳ ಪತ್ರದಲ್ಲಿ ಚಾಲಕ ನೋವು ತೋಡಿಕೊಂಡಿದ್ದಾರೆ.