ಸಿದ್ದರಾಮಯ್ಯ, ಡಿಕೆಶಿಗೆ ಕೊಲೆ ಬೆದರಿಕೆ: ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್, ವೀರಣ್ಣ ವಿರುದ್ಧ ಕಾಂಗ್ರೆಸ್ ದೂರು
ಫೇಸ್ ಬುಕ್ ಖಾತೆಯ ಎಡ್ಮಿನ್ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಂಗಳೂರು: 'ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ವೀರಣ್ಣ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್, ಫೇಸ್ ಬುಕ್ ಖಾತೆಯ ಎಡ್ಮಿನ್ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್ರಾಜ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಿರೂಪಕ ಅರುಣ್ ಬಡಿಗೇರ್ ಮತ್ತು ದಾವಣಗೆರೆ ಮೂಲದ ವೀರಣ್ಣ ಅವರ ಪ್ರಚೋದನಾತ್ಮಕ ಹೇಳಿಕೆ ಇರುವ ಸಂಭಾಷಣೆಯ ವಿಡಿಯೋವನ್ನು ಪಬ್ಲಿಕ್ ಟಿವಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ?
30 -6- 2022 ರಂದು (ಗುರುವಾರ) ಕೋಮು ಭಾವನೆಯನ್ನು ಪ್ರಚೋದಿಸುವಂತೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಸಾರ್ವಜನಿಕರ ಫೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದ್ದ ವೇಳೆ ದಾವಣಗೆರೆಯಿಂದ ಕರೆ ಮಾಡಿ ನೇರಪ್ರಸಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಗುಂಡಿಟ್ಟು ಸಾಯಿಸಿದರೆ, ಎಲ್ಲಾ ಸರಿಹೋಗುತ್ತದೆ ಎಂದು ವೀರಣ್ಣ ಎಂಬಾತ ಹತ್ಯೆ ಮಾಡಲು ಪ್ರಚೋದನೆ ನೀಡಿರುತ್ತಾನೆ, ಆತನ ಹೇಳಿಕೆಯನ್ನು ಕಾರ್ಯಕ್ರಮ ನಿರೂಪಕ ಅರುಣ್ ಬಡಿಗೇರ್, ತೀಕ್ಷ್ಣವಾಗಿ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹದಿಂದ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಬ್ಲಿಕ್ ಟಿ.ವಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದ ವ್ಯಕ್ತಿ!