ಚಿತ್ರದುರ್ಗ: ಮಸೀದಿಯಿಂದ ತೆರಳುತ್ತಿದ್ದ ವ್ಯಕ್ತಿಗೆ ಇರಿತ, ಆರೋಪಿ ನೂತನ್ ಬಂಧನ
ಹಿರಿಯೂರು: ಇಲ್ಲಿನ ಆಲೂರು ಮಸೀದಿಯಲ್ಲಿ ನಮಾಝ್ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಘಟನೆಯಲ್ಲಿ ಸ್ಥಳೀಯ ನಿವಾಸಿ ಸಮೀಯುಲ್ಲಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ನೂತನ್ (22) ಎಂಬಾತನನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.
ಪ್ರಕರಣದ ಕುರಿತು ಚಿತ್ರದುರ್ಗಾ ಜಿಲ್ಲಾ ಎಸ್ಪಿ ಪರಶುರಾಮರವರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದು, "ಚಿಕನ್ ಶಾಪ್ ಬಳಿಕ ಸಮೀಯುಲ್ಲಾ ನಿಂತಿದ್ದ ವೇಳೆ ಆರೋಪಿ ನೂತನ್ ಆತನನ್ನು ದುರುಗುಟ್ಟಿ ನೋಡಿದ್ದ. ಈ ವೇಳೆ ಸಮೀಯುಲ್ಲಾ ದುರುಗುಟ್ಟಿ ನೋಡಿದ್ದಕ್ಕೆ ಬೈದಿದ್ದು, ಅದಾಗಲೇ ಕುಡಿದ ಮತ್ತಿನಲ್ಲಿದ್ದ ಆರೋಪಿಯು ಕೋಪಗೊಂಡು ಮನೆಗೆ ತೆರಳಿ ಚಾಕು ತಂದಿದ್ದ. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿದ ಬಳಿಕ ಮನೆಗೆ ಮರಳಲು ಅಣಿಯಾಗಿದ್ದ ಸಮೀಯುಲ್ಲಾ ತಮ್ಮ ಗೆಳೆಯ ಶ್ರೀನಿವಾಸ್ ಎಂಬವರ ಜೊತೆ ಮಾತನಾಡುತ್ತಿದ್ದ ವೇಳೆ ಆರೋಪಿಯು ಅವರ ದೇಹಕ್ಕೆ ಮೂರು ಬಾರಿ ಇರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹೇಳಿದ್ದಾರೆ.
"ಇದೊಂದು ವೈಯಕ್ತಿಕ ಮತ್ತು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಘಟನೆಯಾಗಿದ್ದು, ಆರೋಪಿಯನ್ನು ನಾವು ಈಗಾಗಲೇ ಬಂಧಿಸಿದ್ದೇವೆ. ಪ್ರಕರಣಕ್ಕೆ ಬೇರೆ ಆಯಾಮವಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ. ಸದ್ಯ ಸಮೀಯುಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ." ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ.