ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಸೋಮವಾರ ನ್ಯಾಯಾಲಯಕ್ಕೆ ಎಫ್ಎಸ್ಎಲ್ ವರದಿ ಸಲ್ಲಿಕೆ
ಬೆಂಗಳೂರು, ಜು.3: ಪಿಎಸ್ಸೈ ನೇಮಕಾತಿ ಅಕ್ರಮ ಆರೋಪ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಇಂದು(ಸೋಮವಾರ) ಓಎಂಆರ್ ಶೀಟ್, ಕಾರ್ಬನ್ ಶೀಟ್ ಬಗೆಗಿನ ಎಫ್ಎಸ್ಎಲ್ ವರದಿಯನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸುಮಾರು 27 ಅಭ್ಯರ್ಥಿಗಳ ಮೇಲೆ ಓಎಂಆರ್ ಶೀಟ್, ಕಾರ್ಬನ್ ಶೀಟ್ನಲ್ಲಿ ಅಕ್ರಮ ಎಸಗಿರುವ ಕುರಿತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ, ಓಎಂಆರ್ ಶೀಟ್ಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಇದೀಗ ಎಫ್ಎಸ್ಎಲ್ ವರದಿಯಲ್ಲಿ ಅಕ್ರಮ ನಡೆದಿರುವುದು ದೃಢವಾಗಿದೆ ಎಂದು ಹೇಳಲಾಗುತ್ತಿದ್ದು, ಈ ವರದಿಯನ್ನು ಸಿಐಡಿ ಕೋರ್ಟ್ ಮುಂದು ಹಾಜರುಪಡಿಸಲಿದೆ. ಅದೇ ರೀತಿ, ಪ್ರಕರಣ ಸಂಬಂಧ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಉತ್ತರ ಬರೆಯದೆ ದರ್ಶನ್ ಗೌಡ ರ್ಯಾಂಕ್ ಬಂದಿದ್ದ.ಅಷ್ಟೇ ಅಲ್ಲದೆ, ಪರೀಕ್ಷೆ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರ ಮಾತ್ರ ಬರೆದಿದ್ದ. ಉಳಿದ ಜಾಗ ಖಾಲಿ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.