ಸೊರಬ: ಜಯಂತ ಕಾಯ್ಕಿಣಿ ಅವರ 'ಜತೆಗಿರುವನು ಚಂದಿರ' ನಾಟಕಕ್ಕೆ ಸಂಘಪರಿವಾರದಿಂದ ಅಡ್ಡಿ
ಶಿವಮೊಗ್ಗ: ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿರುವ ‘ಜತೆಗಿರುವನು ಚಂದಿರ’ ನಾಟಕ ಮುಸ್ಲಿಮರ ಪರವಾಗಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಸೊರಬ ತಾಲೂಕಿನ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ರವಿವಾರ ಶಿವಮೊಗ್ಗದ ರಂಗ ಬೆಳಕು ತಂಡದಿಂದ ‘ಜತೆಗಿರುವನು ಚಂದಿರ’ ನಾಟಕ ಆಯೋಜಿಸಲಾಗಿತ್ತು. ಅದರಂತೆ ನಿನ್ನೆ(ರವಿವಾರ) ರಾತ್ರಿ 7.45ಕ್ಕೆ ನಾಟಕ ಆರಂಭವಾಗಿತ್ತು.
ರಾತ್ರಿ ಸುಮಾರು 9.30ರ ವೇಳೆ ‘ಬೋಲೊ ಭಾರತ್ ಮಾತಾಕಿ ಜೈ’, ‘ಜೈ ಹಿಂದ್’ ಘೋಷಣೆಗಳೊಂದಿಗೆ ಕಲ್ಯಾಣ ಮಂದಿರಕ್ಕೆ ಪ್ರವೇಶಿಸಿದ ಕೆಲವು ಆರೆಸ್ಸೆಸ್ ಹಾಗೂ ಬಜರಂಗದಳ ಕಾರ್ಯಕರ್ತರು ನಾಟಕವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಲ್ಲದೆ ಪ್ರೇಕ್ಷಕರನ್ನು ಹೊರಗಡೆ ಕಳುಹಿಸಿದ್ದಾರೆ. ಬಳಿಕ ಸಂಘಟಕರು ನಾಟಕವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಜೋಸೆಫ್ ಸ್ಟೀನ್ ಅವರ ‘ಫಿಡ್ಲರ್ ಆನ್ ದಿ ರೂಫ್’ ನಾಟಕವನ್ನು ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿದ್ದರು.
Next Story